ಪೂರಿಗಾಲಿ ಹನಿ ನೀರಾವರಿ ಯೋಜನೆ ಸದ್ಬಳಕೆ ಬಗ್ಗೆ ರೈತರು ಅರಿವು ಪಡೆದು ಯೋಜನೆ ಯಶಸ್ವಿಗೆ ಕೈ ಜೋಡಿಸಬೇಕೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಮನವಿ ಮಾಡಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಜಿ.ಪುರ ಹೋಬಳಿಯ ಭೂಮಿಯಲ್ಲಿ ಹಸಿರು ಕಂಡು ರೈತರ ಬದುಕು ಹಸನಾಗಬೇಕೆಂಬ ಹಂಬಲದೊಂದಿಗೆ ಹನಿ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದೆ, ರೈತರ ಸಹಕಾರದಿಂದ ಮಾತ್ರ ಯೋಜನೆಯ ಫಲವನ್ನು ಪಡೆಯಲು ಸಾಧ್ಯ ಎಂದರು.
ಹನಿ ನೀರಾವರಿ ಯೋಜನೆಯಡಿಯಲ್ಲಿ ಈಗಗಲೇ 26 ಸಂಘವನ್ನು ಸ್ಥಾಪಿಸಲಾಗಿದೆ, ಒಂದು ಸಾವಿರ ಎಕರೆಗೆ ಒಂದು ಸಂಘದಂತೆ ಭೂ ಮಾಲೀಕತ್ವದ ಆಧಾರದ ಮೇಲೆ 100ರಿಂದ 200 ರೈತರನ್ನು ಸಂಘದ ಸದಸ್ಯರನ್ನಾಗಿ ಮಾಡಲಾಗಿದೆ, ಸಾಮೂಹಿಕ ಕೃಷಿಯಲ್ಲಿ ಎಷ್ಟು ಅವಧಿಯಲ್ಲಿ ಯಾವ ಬೆಳೆ ಬೆಳೆಯಬೇಕು, ಎನ್ನುವ ನಿರ್ಧಾರವನ್ನು ಸಂಘದ ಸದಸ್ಯರೇ ತೆಗೆದುಕೊಳ್ಳಬಹುದಾಗಿದೆ, ಜೊತೆಗೆ ಬೆಲೆ ನಿಗಧಿಯ ಹಕ್ಕನ್ನು ರೈತರೇ ಹೊಂದಿರುವುದರಿಂದ ಆಧುನಿಕ ಕೃಷಿಯಲ್ಲಿ ಬರುವ ಲಾಭವನ್ನು ಜಮೀನಿನ ಆಧಾರದ ಮೇಲೆ ಹಂಚಿಕೊಳ್ಳಬಹುದಾದ ಅವಕಾಶ ಇದೆ ಎಂದರು.
ಬಿ.ಜಿ.ಪುರ ಹೋಬಳಿ ಹನಿ ನೀರಾವರಿ ಯೋಜನೆಯೂ 7 ವರ್ಷಗಳ ನಂತರ ರೈತ ಬಂಧುಗಳಿಗೆ ಫಲ ದೊರೆಯುವಂತ ಕಾಲ ಸನ್ನಿಹವಾಗಿದೆ, ರೈತರು ಯೋಜನೆ ಸಫಲತೆ ಪಡೆದುಕೊಳ್ಳಬೇಕಾದರೇ ಸಂಪೂರ್ಣ ಸಹಕಾರ ಆಗತ್ಯವಾಗಿದೆ, ಸಾಮೂಹಿಕ ಕೃಷಿ ಪದ್ದತಿ ಮತ್ತು ಏಕ ಬೆಳೆ ಪದ್ದತಿಯಿಂದ ಮಾತ್ರ ಲಾಭದಾಯಕ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದನ್ನು ರೈತರಿಗೆ ತಿಳಿಸಿಕೊಟ್ಟು, ರೈತರು ಸಾಂಘೀಕ ಕೃಷಿ ಚಟುವಟಿಕೆಗೆ ರೈತರು ಪ್ರಾಮಾಣಿಕವಾಗಿ ತೊಡಗಿಕೊಳ್ಳುವಂತೆ ಮಾಡಿ, ಅವರ ಒಪ್ಪಿಗೆ ಆಧಾರದ ಮೇಲೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.
ಬಿಜಿಪುರ ಹೋಬಳಿಯಾದ್ಯಂತ ಫಲಾನುಭವಿಗಳ ಸಭೆ ನಡೆಸಿ ಹನಿ ನೀರಾವರಿ ಯೋಜನೆಯ ಅನುಕೂಲಗಳ ಬಗ್ಗೆ ಅರಿವು ಮೂಡಿಸಲಾಗಿತ್ತು, ಹಲವಾರು ರೈತರಿಗೆ ಇಂದಿಗೂ ಮಾಹಿತಿಯ ಕೊರತೆ ಇರುವುದರಿಂದ ಮತ್ತೊಂದು ಭಾರಿ ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಂಪೂರ್ಣವಾಗಿ ಅರ್ಥ ಮಾಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಚುನಾವಣಾ ನೀತಿಸಂಹಿತೆಯಿಂದಾಗಿ ಮಂದಗತಿಯಲ್ಲಿದ್ದ ಅಭಿವೃದ್ದಿ ಕಾರ್ಯಗಳಿಗೆ ಚುರುಕು ನೀಡಲಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಹಲವಾರು ಸೂಚನೆಗಳನ್ನು ನೀಡಲಾಗಿದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಖಾತೆಯಾಗಿರುವ ಬಗ್ಗೆನಡೆಯುತ್ತಿರುವ ತನಿಖೆಯ ವೇಗವನ್ನು ಹೆಚ್ಚಿಸಲಾಗಿದೆ, ತಾಲ್ಲೂಕಿನಲ್ಲಿ ಅಕ್ರಮಗಳ ದಂಧೆಗಳ ಹಟ್ಟಹಾಸವನ್ನು ಮಟ್ಟಹಾಕಲು ತಾಲ್ಲೂಕು ಆಡಳಿತದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿದೆ ಎಂದರು.
ಆಡಳಿತ ಮತ್ತು ಅಭಿವೃದ್ದಿಯನ್ನು ಸಮತೋಲನವಾಗಿ ತೆಗದುಕೊಂಡು ಹೋಗಿ ಶ್ರೀಸಾಮಾನ್ಯರ ಬದುಕನ್ನು ರೂಪಿಸಲು ಹಲವಾರು ಜನಪರ ಕಾರ್ಯಕ್ರಮವಳನ್ನು ಹಮ್ಮಿಕೊಳ್ಳಲಾಗುವುದು, ಅಕ್ರಮ ದಂಧೆಯಲ್ಲಿ ತೊಡಗಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.