ಶಿಕ್ಷಣ ಎಲ್ಲರಿಗೂ ದೊರೆಯುವಂತಾಗಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.
ಮಂಡ್ಯ ನಗರದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಹಿತ್ಯ ಲಯನ್ಸ್ ಸಂಸ್ಥೆ, ಮಂಡ್ಯ ಲಯನ್ಸ್ ಸಂಸ್ಥೆ, ಒಡನಾಡಿ ಲಯನ್ಸ್ ಸಂಸ್ಥೆ, ಬೆಳಕು ಲಯನ್ ಸಂಸ್ಥೆ, ಮಂಡ್ಯ ಅಕ್ಷಯ ಲಯನ್ ಸಂಸ್ಥೆ ಹಾಗೂ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜು ವತಿಯಿಂದ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅನಕ್ಷರಸ್ಥರನ್ನು ಅಕ್ಷರಸ್ಥರಾಗಿ ಮಾಡುವುದು ಮುಖ್ಯವಾಗಬೇಕು. ಮಕ್ಕಳ ಶಿಕ್ಷಣ ಮೂಲಕ ಉನ್ನತ ಗುರಿಯನ್ನು ಮುಟ್ಟಬೇಕು. ಶಿಕ್ಷಣದ ಉದ್ದೇಶವನ್ನು ಮರೆತು ನಾವು ಸರ್ಕಾರಿ ಕೆಲಸವನ್ನೇ ಉದ್ಯೋಗಕ್ಕಾಗಿ ಪಡೆಯುವ ಶಿಕ್ಷಣಕ್ಕೆ ಜೋತು ಬಿದ್ದಿದ್ದೇವೆ. ಇದರಲ್ಲಿ ಅಭಿವೃದ್ಧಿ ಎಂಬುದು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಶಿಕ್ಷಕರು ಗುಣಮಟ್ಟದ ಬೋಧನೆ ಮಾಡುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಅಭಿಯಂತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಲಯನ್ಸ್ನ ಕೆ.ಎಲ್.ರಾಜಶೇಖರ್, ಚಿಕ್ಕಸ್ವಾಮಿ, ಡಾ.ಕೃಷ್ಣೇಗೌಡ ಹುಸ್ಕೂರು, ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ಶ್ರೀನಿವಾಸ್, ಶೈಕ್ಷಣಿಕ ಪಾಲುದಾರ ಎಂ.ಆರ್.ಮಂಜು, ಚೇತನ್ ಕೃಷ್ಣ, ಲಯನ್ಸ್ನ ವಿ.ಹರ್ಷ, ಟಿ.ನಾರಾಯಣಸ್ವಾಮಿ, ಚಂದ್ರಶೇಖರ್, ಎಲ್.ಕೃಷ್ಣ, ಪುಟ್ಟಸ್ವಾಮಿ, ಎಂ.ಸಿ.ಭಾಸ್ಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.