ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ.ಎಸ್ ಅಶ್ವತಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಕ್ಷಿಪ್ರ ಪಡೆ ತಂಡ ಮತ್ತು ವೀಡಿಯೋ ಕಣ್ಗಾವಲು ತಂಡಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಮುಕ್ತಾಯ ವಾಗುವ ಜೂನ್ 17 ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಚುನಾವಣಾ ಕಾರ್ಯಕ್ಕೆ ನೇಮಕವಾಗಿರುವ ತಂಡ ಮತ್ತು ಅಧಿಕಾರಿಗಳು ಯಾವುದೇ ಲೋಪದೋಷಕ್ಕೆ ಆಸ್ಪದ ನೀಡದೆ ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಕ್ಷಿಪ್ರ ಪಡೆ ಮತ್ತು ಕಣ್ಗಾವಲು ತಂಡಗಳು ಅಭ್ಯರ್ಥಿಗಳು ಬಗ್ಗೆ ಸೂಕ್ತ ನಿಗಾವಹಿಸಬೇಕು. ನೀತಿಸಂಹಿತೆ ಉಲ್ಲಂಘನೆ ಮಾಡುವ ಪಕ್ಷಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ : ಸಿಇಒ ದಿವ್ಯಪ್ರಭು
ಜಿಲ್ಲೆಯಲ್ಲಿ ವಿ.ಎಸ್.ಟಿ, ಎಫ್.ಎಸ್.ಟಿ ಹಾಗೂ ಎಂ.ಸಿ.ಸಿ ತಂಡಗಳನ್ನು ರಚಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಂಡಗಳು ತಿಳಿದುಕೊಂಡು ಚುನಾವಣೆ ಸುಗಮವಾಗಿ ನಡೆಯಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿ.ಪಂ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಆರ್.ಜೆ ದಿವ್ಯಾಪ್ರಭು ತಿಳಿಸಿದರು.
ಇದೇ ವೇಳೆ ಜಿ.ಪಂ.ಯೋಜನಾಧಿಕಾರಿ ಪ್ರಭುಸ್ವಾಮಿ ಮಾತನಾಡಿ, ಚುನಾವಣೆ ಸಂಬಂಧ ದೂರು ಬಂದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕ್ಷಿಪ್ರಪಡೆ ತಂಡ ವರದಿ ನೀಡಬೇಕು.ತನಿಖಾ ವರದಿಯಲ್ಲಿ ಸೂಕ್ತ ದಾಖಲೆಗಳು ಇರಬೇಕು.ಸ್ಪಷ್ಟ ಅಭಿಪ್ರಾಯದೊಂದಿಗೆ
ಕಾಲಮಿತಿಯೊಳಗೆ ವರದಿಬಸಲ್ಲಿಸಿ ಎಂದರು.
ವೀಡಿಯೋ ಕಣ್ಗಾವಲು ತಂಡಗಳು ಚುನಾವಣಾ ಸಂಬಂಧ ಜರುಗುವ ಕಾರ್ಯಕ್ರಮ, ಚುನಾವಣಾ ಪ್ರಚಾರ, ಇತರೆ ವಿಷಯಗಳ ಸಂಬಂಧಪಟ್ಟ ಮಾಹಿತಿಯನ್ನು ದಾಖಲೀಕರಣ ಮಾಡಿಕೊಳ್ಳಬೇಕು.ಕಾರ್ಯಕ್ರಮ ಕುರಿತು ಸಮಯ, ಸ್ಥಳ ಹಾಗೂ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ದಾಖಲಿಸಿ ಪ್ರತಿ ದಿನ ನಿಗದಿತ ನಮೂನೆಯಲ್ಲಿ ಮಾಹಿತಿ ಒದಗಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ ನ ಉಪ ಕಾರ್ಯದರ್ಶಿ (ಆಡಳಿತ) ಸರಸ್ವತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.