ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ, ಅಧಿಕಾರ ಹಿಡಿಯುವುದಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ದೇಶದ ಸಮಾಜವಾದಿ ಚಿಂತಕ ರಘು ಠಾಕೂರ್ ಹೇಳಿದರು.
ಮಂಡ್ಯನಗರದ ಜೆ.ಪಿ.ಸ್ಮಾರಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ”ಇಂದಿನ ರಾಜಕೀಯ ಪರಿಸ್ಥಿತಿ” ಮತ್ತು ”ಸಮಾಜವಾದದ ಚಿಂತನೆ” ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ”ಮಹಾತ್ಮ ಗಾಂಧಿಯನ್ನು ಕೊಂದವರು ಹಿಂದೂಗಳೇ ಹೊರತು ಬೇರಾರು ಅಲ್ಲ. ಪಾಕಿಸ್ತಾನದಿಂದ ಬಂದು ಗಾಂಧಿ ಕೊಲ್ಲಲಿಲ್ಲ, ಇದರ ಬಗ್ಗೆ ಚಿಂತನೆ ನಡೆಯಬೇಕು” ಎಂದರು.
ಅಲ್ಪ ಸಂಖ್ಯಾತರ ಮೇಲೆ ಅಸಹಿಷ್ಣುತೆ ತೋರುತ್ತಿರುವುದು ಸರಿಯಲ್ಲ. ಮುಂದೆ ಈ ದೇಶದ ಪರಿಶಿಷ್ಟರು, ಬೇರೆ ಸಣ್ಣ ಧರ್ಮಗಳೂ ಇದರಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸುವ ಮೂಲಕ ಇಡೀ ದೇಶದ ಸಮಗ್ರತೆ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ವಿಷಾಧಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜೆ.ಪಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಎಚ್.ನಾರಾಯಣ, ಗೌರವ ಕಾರ್ಯದರ್ಶಿ ಕೌಡ್ಲೆಚನ್ನಪ್ಪ, ಕೆ.ಮಾಯಿಗೌಡ, ಬಸವರಾಜು, ವೈ.ಎಸ್.ಸಿದ್ದರಾಜು ಇತರರು ಹಾಜರಿದ್ದರು.