ಕರ್ನಾಟಕದ ಹಿಂದುಳಿದ ಜಾತಿ ಕುರುಬ ಸಮಾಜದ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸೋಲುವ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸದ ಪುಟಗಳಿಗೆ ಸೇರಿ ಹೋದ ದುರಂತ ನಾಯಕನಾದುದು ನಿಜಕ್ಕೂ ದುರದೃಷ್ಟಕರ ವಿಚಾರ.
ಅತ್ಯಂತ ಸುದೀರ್ಘ ಕಾಲದ ರಾಜಕೀಯ ಜೀವನದ ಹಿನ್ನೆಲೆ ಇದ್ದ ಈಶ್ವರಪ್ಪ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪ ಜೊತೆಗೂಡಿ ಅಡಿಪಾಯ ಹಾಕಿದವರು.ಆದರೆ ರಾಜ್ಯದ ರಾಜಕೀಯ, ಜಾತಿ ಲೆಕ್ಕಾಚಾರ, ಜನ ಸಮುದಾಯಗಳ ವೋಟ್ ಬ್ಯಾಂಕ್ ಅನ್ನು ಅರ್ಥ ಮಾಡಿಕೊಳ್ಳದೆ ಹೋದದ್ದು ನಿಜಕ್ಕೂ ದುರಂತ.
ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದು ಬಂದ ಈಶ್ವರಪ್ಪ ತಮ್ಮ ಬದುಕಿನ ಕೊನೆಯ ಕಾಲಘಟ್ಟದಲ್ಲಿ ಸಹ ಸಂಘದ ಕಾರ್ಯಕರ್ತನಂತೆ, ಹೊಸದಾಗಿ ಬಂದ ಬಿಸಿರಕ್ತದ ಹುಡುಗನಂತೆ ಆಡಿಕೊಂಡು, ಅತ್ಯಂತ ಪ್ರಬುದ್ಧ ರಾಜಕಾರಣಿಯಾಗಿ ಬೆಳೆದಿರುವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡದ್ದು ಅವರ ದಡ್ಡತನದ ಪರಮಾವಧಿಯಾಗಿತ್ತು.
ಖಾಸಗಿಯಾಗಿ ಸಿಕ್ಕಾಗ ಸಂಘದವರು ಮಾತನಾಡುತ್ತಿದ್ದ ವೈಯಕ್ತಿಕ ಅಭಿಪ್ರಾಯಗಳನ್ನೇ ನಿಜವಾದ ರಾಜಕೀಯ ಎಂದು ಹಿಂದುಳಿದ ವರ್ಗದ ಈಶ್ವರಪ್ಪ ಭಾವಿಸಿದರು. ಬಿ.ಎಲ್.ಸಂತೋಷ್ ಬಣ ಮತ್ತು ಯಡಿಯೂರಪ್ಪ ಬಣದ ಹಗ್ಗ-ಜಗ್ಗಾಟದಲ್ಲಿ ಈಶ್ವರಪ್ಪ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಯಿತು ಎಂದು ಈಶ್ವರಪ್ಪನವರ ಅಪ್ತರೇ ಮಾತನಾಡಿ ಕೊಳ್ಳುವಂತಾಗಿದೆ.