ಕೆ.ಆರ್.ಪೇಟೆ ಪಟ್ಟಣದ ವಿಧಾನಸೌಧದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ.ನಾರಾಯಣಗೌಡ ಮತ್ತು ಅಬಕಾರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಅವರು ಇಂದು ಜಂಟಿ ಸುದ್ದಿಗೋಷ್ಟಿ ನಡೆಸಿ ಮಹಾಕುಂಭಮೇಳದ ಕುರಿತು ಮಾಹಿತಿ ನೀಡಿದರು.
ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದ್ದು, ಹಲವು ಸಾಧು ಸಂತರು ಸೇರಿದಂತೆ 6 ಲಕ್ಷಕ್ಕೂ ಹೆಚ್ಚಿನ ಜನರು ಭೇಟಿ ನೀಡುವ ಸಾಧ್ಯತೆ ಇದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸ್ವಾಮೀಜಿಗಳಿಗೆ, ಸಾಧು ಸಂತರಿಗೆ, ಅತಿ ಗಣ್ಯರಿಗೆ, ಭಕ್ತರಿಗೆ ಪ್ರತ್ಯೇಕ ಸ್ನಾನಘಟ್ಟ ನಿರ್ಮಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಮಾಹಿತಿ ನೀಡಿದರು.
ಬರುವ ಜನರಿಗೆ ನಾಲ್ಕು ದಿನಗಳ ಕಾಲ ನಿರಂತರವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. 200 ಕ್ಕೂ ಹೆಚ್ಚು ಬಯೋ ಟಾಯ್ಲೆಟ್ ವ್ಯವಸ್ಥೆ, 200 ಸಾಧುಗಳ ವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಕುಂಭಮೇಳ ನಡೆಯಲಿದ್ದು, ಹಲವು ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ವೀರೇಂದ್ರ ಹೆಗ್ಗಡೆಗೆ ಆಹ್ವಾನ
ಅಕ್ಟೋಬರ್ 13-16 ರವರೆಗೂ ನಡೆಯಲಿರುವ ಮಹಾಕುಂಭಮೇಳಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಇಂದು ಆಹ್ವಾನಿಸಿದರು.
ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಆದಿ ಚುಂಚನಗಿರಿ ಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಮಹಾ ಕುಂಭ ಮೇಳ ನಡೆಯಲಿದೆ. 200 ಜನ ಸಾಧು, ಸಂತರು ಭಾಗಿಯಾಗಲಿದ್ದಾರೆ. ಬರುವವರಿಗೆ ನಾಲ್ಕು ದಿನವು ಊಟ, ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಸಂಗಮಕ್ಕೆಆಗಮಿಸುವ ಸ್ವಾಮೀಜಿಗಳಿಗೆ, ಸಾಧು ಸಂತರಿಗೆ, ವಿವಿಐಪಿ ಗಣ್ಯರಿಗೆ ಪ್ರತ್ಯೇಕ ಸ್ನಾನಘಟ್ಟವನ್ನು ನಿರ್ಮಾಣ ಮಾಡಲಾಗಿದೆ. ಯಾತ್ರಾರ್ಥಿಗಳಿಗಾಗಿ 200 ಕ್ಕೂ ಹೆಚ್ಚು ಬಯೋ ಟಾಯ್ಲೆಟ್, ಯಾತ್ರಾರ್ಥಿಗಳಿಗೆ ವೈ ಫೈ ಸೌಲಭ್ಯ, 200 ಸಾಧುಗಳಿಗೆ ಟೆಂಟ್ ನಿರ್ಮಾಣ ಮಾಡಿಕೊಡಲಾಗಿದೆ.
ಸಂಗಮದ ಬಳಿ ನುರಿತ ಈಜುಗಾರರು ಹಾಗೂ ಮುಳಗು ತಜ್ಞರನ್ನು ನೇಮಕ ಮಾಡಲಾಗಿದೆ. ಬರುವವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.