ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಶಿಕ್ಷಣದ ಜೊತೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಸಲಹೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಆರೋಗ್ಯ ಕೇಂದ್ರ ವ್ಯಾಪ್ತಿಯ ಮೊಗರಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಪ್ರೌಢ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಏರ್ಪಡಿಸಿದ “ಪ್ರಬಂಧ ಸ್ಪರ್ಧೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರೇ ನಾಳಿನ ನಾಗರಿಕರು. ಆರೋಗ್ಯ ಕೊಂಡು ಕೊಳ್ಳುವ ವಸ್ತು ಅಲ್ಲ, ಪೇಟೆಯಲ್ಲಿ ಸಿಗುವ ವಸ್ತು ಅಲ್ಲ. ಹಾಗಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪೌಷ್ಠಿಕ ಆಹಾರ ಸೇವಿಸಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಎಸ್. ಎನ್. ತಿಮ್ಮರಾಜು ಮಾತನಾಡಿ, ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಅನಾನುಕೂಲಗಳ ಹಾಗೂ ಇದರ ಕಡಿವಾಣಕ್ಕಿರುವ ಕೋಟ್ಪಾ ಕಾಯಿದೆಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ, ವಿದ್ಯಾರ್ಥಿಗಳು ತಂಬಾಕು ಮುಕ್ತ ಜೀವನ ನಡೆಸುವಂತೆ ಸಲಹೆ ನೀಡಿದರು. ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಬಿ ಹೇಮಣ್ಣ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಆಯುಷ್ಮಾನ್ ಭಾರತ್- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ -ಆರೋಗ್ಯ ಕರ್ನಾಟಕ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಮಾನಸಿಕ ಆರೋಗ್ಯ ,ಅಂಗಾಂಗ ದಾನ, ಹದಿಹರೆಯದವರ ಆರೋಗ್ಯದ ಕಾಳಜಿ, ವೈಯುಕ್ತಿಕ ಸ್ವಚ್ಚತೆ ಇನ್ನಿತರ ವಿಷಯಗಳ ಕುರಿತಂತೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು .
ಸದರಿ ಸ್ಪರ್ಧೆಯಲ್ಲಿ ಲಕ್ಷಿತ್ ಹೆಚ್.ಆರ್. (ಪ್ರಥಮ) ,ಸಿಂಚನ ಎಸ್ (ದ್ವಿತೀಯ), ಜಾನ್ಹವಿ ಎಂ( ತೃತೀಯ) ಬಹುಮಾನ ಪಡೆದರು.
ಮುಖ್ಯ ಶಿಕ್ಷಕಿ ಸುನಂದಮ್ಮ ಎಸ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಹೇಮಾವತಿ ಬಿ, ನಂದಿನಿ ಬಿ, ಅನಿತಾ ಜಾನಿ ,ರವಿಕುಮಾರ್ ಎಸ್,ಸಿದ್ದಪ್ಪಾಜಿ ಎಸ್ ,ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಮಿತ ಹಾಜರಿದ್ದರು.