ಇತ್ತೀಚಿನ ಕೆಲ ತಿಂಗಳುಗಳಿಂದ ಮಂಡ್ಯದ ಕರ್ನಾಟಕ ಜಲ ಮಂಡಳಿ ನೀಡುತ್ತಿರುವ ನೀರಿನ ಬಿಲ್ಲನ್ನು ಕಂಡು ಮಂಡ್ಯನಗರದ ನಾಗರಿಕರು ಅಕ್ಷರಶಃ ಹೌಹಾರಿದ್ದಾರೆ. ಏಕೆಂದರೆ ಮಂಡ್ಯನಗರದ ವಾಸಿ ಸಮೀವುಲ್ಲಾ (ಬಳಕೆದಾರರ ಸಂಖ್ಯೆ 8626) ಎಂಬುವರ ಕುಟುಂಬಕ್ಕೆ ಕಳೆದ ಜನವರಿ ತಿಂಗಳ ನೀರಿನ ಶುಲ್ಕ ₹ 5209 ಬಂದಿದೆ.
ಕೇವಲ ಸಮೀವುಲ್ಲಾ ಅವರಿಗೆ ಮಾತ್ರವಲ್ಲ ಮಂಡ್ಯನಗರದ ಹಲವು ಕುಟುಂಬಗಳಿಗೆ ತಿಂಗಳ ನೀರಿನ ಶುಲ್ಕವೇ ₹2000, ₹3000 ಹಾಗೂ ₹4000 ದ ಹಾಸುಪಾಸಿನಲ್ಲಿ ಬಂದಿದೆ. ಇದನ್ನು ಕಂಡು ಹೌಹಾರಿರುವ ನಾಗರೀಕರು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿಗಿಂತ ಮಂಡ್ಯದಲ್ಲೇ ಹೆಚ್ಚು ಶುಲ್ಕ
ಮೈಸೂರು ಮಹಾನಗರಕ್ಕಿಂತ ಮಂಡ್ಯನಗರದಲ್ಲಿಯೇ ನೀರಿಗೆ ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ. ಮೈಸೂರಿನಲ್ಲಿ 1 ಸಾವಿರ ಲೀಟರ್ ನೀರಿಗೆ ₹ 8 ರೂ. ಶುಲ್ಕ ವಿಧಿಸುತ್ತಿದ್ದೆ, ಮಂಡ್ಯದಲ್ಲಿ 1 ಸಾವಿರ ಲೀ. ನೀರಿಗೆ ₹ 26.25 ರೂ. ವಿಧಿಸಲಾಗುತ್ತಿದೆ ಇದು ಯಾವ ನ್ಯಾಯ ಎಂದು ಸರ್ವೋದಯ ಕರ್ನಾಟಕ ಪಕ್ಷದ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಧುಚಂದನ್ ಪ್ರಶ್ನಿಸಿದ್ದಾರೆ.
ಮಂಡ್ಯನಗರದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ನಾನು ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಮಂಡ್ಯನಗರದ ನೈಜ್ಯ ಪರಿಸ್ಥಿತಿ ಅರ್ಥವಾಗಿದೆ. ನೀರಿನ ಶುಲ್ಕವನ್ನೆ ಸಾವಿರಾರು ರೂಪಾಯಿ ನೀಡಿದರೆ ಬಡವರು ಬದುಕುವುದು ಹೇಗೆ ? ಕೂಡಲೇ ಶುಲ್ಕ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
2019ರ ಏಪ್ರಿಲ್ ತನಕ ₹120 ರೂ. ಇದ್ದ ನೀರಿನ ಶುಲ್ಕ, ಈಗ ಪಾಲಿಕೆಗಿಂತ ದುಬಾರಿಯಾಗಿದೆ. ಆದ್ದರಿಂದ ಕರ್ನಾಟಕ ಜಲಮಂಡಳಿಯೂ ಕೂಡ ದರ ಏರಿಕೆಯನ್ನು ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಮಂಡ್ಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಧುಚಂದನ್ ಎಚ್ಚರಿಸಿದರು.