‘ತಮಿಳುನಾಡಿಗೆ ನೀರು ಬಿಡಿ’ ಎಂದು ಆದೇಶ ನೀಡಿರುವ ಕಾವೇರಿ ನೀರು ನಿರ್ವಹಣಾ ಸಮಿತಿಯ ನಡೆ ಖಂಡಿಸಿ, ಮಂಡ್ಯದಲ್ಲಿ ನಡೆಯುತ್ತಿರುವ ನಿರಂತರ ಧರಣಿಗೆ ನಾಡಿನ ವಿವಿಧೆಡೆಯಿಂದ ಹಲವು ಸಂಘಟನೆಗಳು ಹಾಗೂ ಮುಖಂಡರು ಗುರುವಾರ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಬೆಂಗಳೂರಿನ ಗೌಡತಿಯರ ಸೇನೆ, ಗೌಡರ ಯುವಸೇನೆ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗ ಪದವೀಧರರ ವೇದಿಕೆ ಕಾರ್ಯಕರ್ತರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ಮೈಸೂರು ಮಂಡ್ಯ, ಬೆಂಗಳೂರಿನ ಜೀವಜಲವಾಗಿದೆ, ಕರ್ನಾಟಕದಲ್ಲಿ 2 ದಶಕಗಳ ಕಾಲದಿಂದ ಹೋರಾಟ ನಡೆಯುತ್ತಾ ಬಂದಿದೆ, ಜೀವಜಲಕ್ಕಾಗಿ ತಮಿಳುನಾಡು ಹಾಗು ಕರ್ನಾಟಕದಲ್ಲಿ ಗಲಾಟೆ ನಡೆದಿವೆ, ಆದರೆ ಯಾವುದೇ ಸರ್ಕಾರ ಅಥವಾ ನ್ಯಾಯಾಲಯ ಇದನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.
ಸಂಕಷ್ಟದ ಸಮಯದಲ್ಲಿ ತಮಿಳುನಾಡು ಸರ್ಕಾರ ಕ್ಯಾತೆ ತೆಗೆಯುತ್ತಿದೆ, ನ್ಯಾಯಾಲಯ ಕೂಡ ಕುರುಡರಂತೆ ವರ್ತಿಸಿ ನೀರು ಬಿಡಲು ಆದೇಶ ನೀಡುತ್ತಿದೆ, ನೀರಿಲ್ಲದ ಕರ್ನಾಟಕದ ಜನ ಪ್ರಾಣ ಬಿಡುತ್ತಿದ್ದಾರೆ, ರೈತರ ಸಂಕಷ್ಟ ಹೇಳತೀರದಾಗಿದೆ ಎಂದರು.
ಎಸ್ ಡಿ ಪಿ ಐ ಬೆಂಬಲ
ಎಸ್ ಡಿ ಪಿ ಐ ನೇತೃತ್ವದಲ್ಲಿ ಕಾವೇರಿ ಹೋರಾಟ ಬೆಂಬಲಿಸಿ ಧರಣಿ ನಿರತರಾಗಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಿ, ಪರ್ಯಾಯ ವ್ಯವಸ್ಥೆ ಮೂಲಕ ನ್ಯಾಯ ಪಡೆಯಲು ಮುಂದಾಗಬೇಕೆಂದು ಒತ್ತಾಯಿಸಿದರು. ಅಧ್ಯಕ್ಷ ಸಾದತ್, ಉಪಾಧ್ಯಕ್ಷ ಮುಕ್ತಿಯಾರ್,ಮುಬಾರಕ್ ಹುಸೇನ್, ಆಸ್ಕರ್ ಭಾಗವಹಿಸಿದ್ದರು.
ಧರಣಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ನೇತೃತ್ವ ವಹಿಸಿದ್ದರು. ಸಮಿತಿಯ ಸುನಂದ ಜಯರಾಂ, ಕೆ ಬೋರಯ್ಯ,ಅಂಬುಜಮ್ಮ. ಜಿ.ಬಿ ಶಿವಕುಮಾರ್, ಜಯ ಕರ್ನಾಟಕ ಸಂಘಟನೆಯ ಯೋಗೇಶ್, ರೈತ ಸಂಘದ ಮುದ್ದೇಗೌಡ, ದಸಂಸ ಎಂ ವಿ ಕೃಷ್ಣ ಇತರರಿದ್ದರು.