- ರಕ್ತಸಿಕ್ತ ಶವಗಳು ಪ್ರತ್ಯೇಕ ಕೋಣೆಗಳಲ್ಲಿ ಪತ್ತೆ
- ಕತ್ತು ಸೀಳಿ ಚಾಕುವಿನಿಂದ ಇರಿದ ಆರೋಪಿ
ಶ್ರದ್ಧಾ ವಾಕರ್ ಕೊಲೆ ಪ್ರಕರಣದ ನಂತರ ದೆಹಲಿ ಜನರನ್ನು ಮತ್ತೊಂದು ಭಯಾನಕ ಘಟನೆ ಬೆಚ್ಚಿಬೀಳಿಸಿದೆ. ಮಾದಕ ವ್ಯಸನಿಯೊಬ್ಬ ಪುನಶ್ಚೇತನ ಕೇಂದ್ರದಿಂದ ಹಿಂತಿರುಗಿದ ಕೆಲವೇ ದಿನಗಳ ಬಳಿಕ ತನ್ನ ಇಡೀ ಕುಟುಂಬವನ್ನು ಕೊಂದಿದ್ದಾನೆ.
25 ವರ್ಷದ ಕೇಶವ್ ಎಂಬಾತ ಮಾದಕ ವ್ಯಸನಿಯಾಗಿದ್ದ. ಪುನಶ್ಚೇತನ ಕೇಂದ್ರದಿಂದ ಹಿಂತಿರುಗಿದ ಬಳಿಕ ಮನೆಯವರೊಂದಿಗೆ ಜಗಳವಾಡಿದ್ದಾನೆ. ಜಗಳದ ನಂತರ ಉದ್ರೇಕಕ್ಕೆ ತಲುಪಿದ ಆತ ಪೋಷಕರು, ತಂಗಿ ಹಾಗೂ ಅಜ್ಜಿಯನ್ನು ಚಾಕುವಿನಿಂದ ಇರಿದು ಸಾಯಿಸಿದ್ದಾನೆ.
ನೈಋತ್ಯ ದೆಹಲಿಯ ಪಾಲಮ್ನಲ್ಲಿರುವ ಅವರ ಮನೆಯಲ್ಲಿ ಮಂಗಳವಾರ ರಾತ್ರಿ ಮೃತದೇಹಗಳು ಪತ್ತೆಯಾದ ಬಳಿಕ ಕೇಶವನನ್ನು ಬಂಧಿಸಲಾಗಿದೆ. ಮನೆಯೆಲ್ಲ ರಕ್ತಸಿಕ್ತವಾಗಿದ್ದು, ಚಾಕುವಿನಿಂದ ಮನೆಯವರ ಕತ್ತು ಸೀಳಿ ಅನೇಕ ಬಾರಿ ಅವರ ದೇಹಗಳಿಗೆ ಇರಿದಿದ್ದಾನೆ ಎಂದು ಪೊಲೀಸರು ಭಯಾನಕ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಕೇಶವ್ನ ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ್ (50), ತಾಯಿ ದರ್ಶನಾ ಹಾಗೂ ತಂಗಿ ಊರ್ವಶಿ (18) ಅವರ ರಕ್ತಸಿಕ್ತ ಶವಗಳು ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ.
ಆತನ ಹೆತ್ತವರ ಶವಗಳು ಸ್ನಾನಗೃಹದಲ್ಲಿ ಸಿಕ್ಕರೆ, ತಂಗಿಯ ಮತ್ತು ಅಜ್ಜಿಯ ಮೃತದೇಹಗಳು ಇತರ ಕೊಠಡಿಗಳಲ್ಲಿ ಕಂಡುಬಂದಿವೆ.
ಒಂದು ತಿಂಗಳ ಹಿಂದೆ ಕೇಶವ್ ಗುರ್ಗಾಂವ್ನಿಂದ ಕೆಲಸ ತೊರೆದಿದ್ದ. ಕೊಲೆ ಮಾಡುವ ಸಂದರ್ಭದಲ್ಲಿ ಆತ ಮಾದಕ ವ್ಯಸನದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ರಾತ್ರಿ ಹತ್ತೂವರೆ ಸುಮಾರಿಗೆ ಮನೆಯಿಂದ ಕಿರುಚಾಟ ಕೇಳಲು ಆರಂಭಿಸಿದೆ. ಭಯಭೀತರಾದ ನೆರೆಹೊರೆಯವರು ಹಾಗೂ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇಶವ್ ಪರಾರಿಯಾಗಲು ಯತ್ನಿಸಿದ್ದು, ಸಂಬಂಧಿಕರು ಆರೋಪಿಯನ್ನು ಕೂಡಿಹಾಕಿದ್ದಾರೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.