ನಾಗಮಂಗಲ ತಾಲೂಕಿನಾದ್ಯಂತ ಗೋಮಾಳದ ಜಮೀನಿನಲ್ಲಿ ರೈತರು 40-50ವರ್ಷಗಳ ಕಾಲ ಉಳುಮೆ ಮಾಡಿಕೊಂಡು ಬರುತ್ತಿದ್ದರೂ,ಅರಣ್ಯಾಧಿಕಾರಿಗಳು ನಮ್ಮದೆಂದು ದರ್ಪದಿಂದ ವರ್ತಿಸಿ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಾಗಮಂಗಲ ಪಟ್ಟಣದ ಬಿ ಜಿ ಎಸ್ ವೃತ್ತದಿಂದ ತಾಲೂಕು ಕಚೇರಿಯವರೆಗೆ ಬೃಹತ್ ಮೆರವಣಿಗೆ ಮೂಲಕ ತೆರಳಿ ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ
ಡಿ.ಟಿ. ಶ್ರೀನಿವಾಸಯ್ಯ ಮಾತನಾಡಿ,ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ಅತಿ ಹೆಚ್ಚು ದುರ್ವರ್ತನೆ ತೋರುತ್ತಿದ್ದಾರೆ, ಸುಮಾರು 40ರಿಂದ 50ವರ್ಷಗಳಿಂದ ರೈತರು ಜಮೀನನ್ನು ಸಾಗುವಳಿ ಮಾಡಿಕೊಂಡು ಬರುತಿದ್ದಾರೆ.
ಆದರೆ ಇಂದು ಅರಣ್ಯ ಇಲಾಖೆಯವರು ಅದು ಅರಣ್ಯ ಭೂಮಿ ಎಂದು ಹೋಗಿ ರೈತರು ಉಳುಮೆ ಮಾಡುತಿದ್ದ ಭೂಮಿಯನ್ನ ವಶಪಡಿಸಿಕೊಂಡು ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ.ರೈತರ ಮೇಲೆ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಅರಣ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ರೈತರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದಕ್ಕೆ ಜನಪ್ರತಿನಿಧಿಗಳ ಮೇಲೆ ದೂರು ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಎಲ್ಲಿಂದಲೋ ಬಂದು ಇಲ್ಲಿ ಕೆಲಸಕ್ಕೆ ಸೇರಿಕೊಂಡು ಜನಪ್ರತಿನಿಧಿಗಳ ಮೇಲೆ ದೂರು ನೀಡಿರುವುದು ತಪ್ಪು. ಕೂಡಲೇ ದೂರನ್ನು ಹಿಂಪಡೆಯಬೇಕು ಎಂದರು.
ರೈತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಂತಹ ಘಟನೆ ನಡೆದರೆ ಸ್ಥಳದಲ್ಲೇ ಪ್ರತಿಭಟನೆ ಮಾಡುತ್ತೇವೆ.ರೈತರ ಭೂಮಿಯನ್ನು ರೈತರಿಗೆ ಕೊಟ್ಟೆ ಕೊಡಿಸುತ್ತೇವೆ. ಇದಕ್ಕೆ ಸಂಬಂಧ ಪಟ್ಟ ಸಚಿವರು ರೈತರ ಮೇಲೆ ಆಗುತ್ತಿರುವ ದೌರ್ಜನ್ಯ ತಪ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿ ಉಪತಹಸೀಲ್ದಾರ್ ಪ್ರಕಾಶ್ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ತಹಸೀಲ್ದಾರ್ ಬಂದು ಮನವಿ ಪಡೆಯಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡರಾದ ನಾಗೇಶ್, ಪ್ರಶಾಂತ್, ಶಿವರಾಮಯ್ಯ,ಶ್ರೀನಿವಾಸ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.