ಮಂಡ್ಯ ಅಬಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟು ಸಾರ್ವಜನಿಕರನ್ನು ಶೋಷಿಸುತ್ತಿದ್ದಾರೆಂದು ಆರೋಪಿಸಿ, ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ರೈತಸಂಘ (ರೈತ ಬಣ)ದ ಕಾರ್ಯಕರ್ತರು ಸೋಮವಾರ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಂಡ್ಯದ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಮಹಾದೇವಿ ಬಾಯಿ ಹಾಗೂ ಕಚೇರಿ ಗುಮಾಸ್ತ ಸಂತೋಷ್ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ, ಕೂಡಲೇ ಈ ಇಬ್ಬರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಬಕಾರಿ ಕಚೇರಿಯ ಪ್ರತಿಯೊಂದು ಕಡತಕ್ಕೂ ಸನ್ನದ್ದುದಾರರು ಗುಮಾಸ್ತನನ್ನು ಭೇಟಿ ಮಾಡಿ, ಅವನು ಕೇಳಿದಷ್ಟು ಹಣ ನೀಡಿದಲ್ಲಿ ಮಾತ್ರ ನಿಮ್ಮೆ ಕೆಲಸವಾಗುತ್ತದೆ ಎಂದು ಭಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ ಆಯುಕ್ತರಾದ ಮಹಾದೇವಿ ಬಾಯಿ ಕೇಂದ್ರ ಸ್ಥಾನದಲ್ಲಿರದೇ, ಸರ್ಕಾರಿ ವಾಹನವನ್ನು ದುರುಪಯೋಗ ಪಡಿಸಿಕೊಂಡು ಪ್ರತಿನಿತ್ಯ ಮೈಸೂರಿಗೆ ಹೋಗಿ ಬರುತ್ತಿದ್ದಾರೆ. ಅಬಕಾರಿ ಕೈಪಿಡಿ ಅನ್ವಯ ಯಾವ ತಾಲ್ಲೂಕಿಗೂ ಭೇಟಿ ನೀಡದೇ, ವಾಸ್ತವ್ಯ ಹೂಡದೇ ಸುಳ್ಳು ಅಂಕಿ ಅಂಶಗಳನ್ನು ಡೈರಿಯಲ್ಲಿ ತೋರಿಸುತ್ತಾ ಎಲ್ಲ ಸನ್ನದುವಿನ ಪುಸ್ತಕಗಳನ್ನು ಕಚೇರಿಗೆ ತರಿಸಿ ಸಹಿ ಮಾಡಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಚಿಲ್ಲರೆ ಅಂಗಡಿ ಮತ್ತು ಡಾಬಾಗಳಲ್ಲಿ ಮದ್ಯ,ಬಿಯರ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ, ಇದರಿಂದ ಹಳ್ಳಿಗಳಲ್ಲಿ ಮಹಿಳೆಯರು ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪ್ರತಿಭಟನೆ ನೇತೃತ್ವವನ್ನು ಮುಖಂಡರಾದ ಇ.ಎನ್.ಕೃಷ್ಣಗೌಡ ಇಂಗಲಗುಪ್ಪ, ಹೆಮ್ಮಿಗೆ ಚಂದ್ರಶೇಖರ್, ರಾಜೇಶ್, ಸಚ್ಚಿದಾನಂದ, ಮಂಜು ಪಾಳ್ಯ, ರಾಮಚಂದ್ರ ಪಾಳ್ಯ ಮತ್ತಿತರರು ವಹಿಸಿದ್ದರು.