ಅಕ್ಷರ ಮತ್ತು ಅನ್ನ ನೀಡಿದಂತಹ ಮಹಾನ್ ವ್ಯಕ್ತಿಗಳನ್ನ ನಾವು ಎಂದಿಗೂ ಮರೆಯಬಾರದೆಂದು ಖ್ಯಾತ ಚಲನ ಚಿತ್ರನಟ ದೊಡ್ಡಣ್ಣ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಭಾರತೀ ಉತ್ಸವ 2023 ರ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.
ಅಕ್ಷರವಿಲ್ಲದೆ ಭವಿಷ್ಯ ರೂಪಿಸಿಕೊಳ್ಳಲಾಗದು. ಹಾಗೆಯೇ ಅನ್ನ ಇಲ್ಲದೆ ಬದುಕಲಾಗದು. ದೇವರ ಕೃಪಾಕಟಾಕ್ಷ ವಿಲ್ಲದೆ ನಾವು ಅಭಿವೃದ್ದಿ ಕಾಣಲು ಸಾಧ್ಯವಿಲ್ಲ. ಹಾಗಾಗಿ ಅಕ್ಷರ ನೀಡಿದಂತಹ ಗುರುಗಳನ್ನ, ಅನ್ನ ನೀಡಿದಂತಹ ರೈತರನ್ನ ಹಾಗೂ ಮನೆ ದೇವರನ್ನ ವರ್ಷಕ್ಕೆ ಒಮ್ಮೆಯಾದರೂ ಎಲ್ಲೆ ಇದ್ದರೂ ಪೂಜಿಸುವ ಸಂಸ್ಕಾರವನ್ನು ನಾವು ಬೆಳೆಸಿಕೊಳ್ಳಬೇಕೆಂದರು.
40 ವರ್ಷಗಳ ಹಿಂದೆ ಕಾಳಮುದ್ದನ ದೊಡ್ಡಿ ಕುಗ್ರಾಮವಾಗಿತ್ತು. ಜಿ.ಮಾದೇಗೌಡರ ದೂರದೃಷ್ಠಿಯ ಫಲವಾಗಿ ಇಂದು ಭಾರತೀನಗರ ಪಟ್ಟಣವಾಗಿ ಬೆಳೆದು ನಿಂತಿದೆ. ಜಿ.ಮಾದೇಗೌಡರ ಸಾಹಸದ ಮುಂದೆ ನಾವೆಲ್ಲರೂ ತಲೆಬಾಗಬೇಕಾಗಿದೆ ಎಂದರು.
ಜಿಲ್ಲೆಗೆ ದಿ.ಡಾ.ಜಿ.ಮಾದೇಗೌಡರ ಸೇವೆ ಅನನ್ಯವಾಗಿದೆ. ಕಾವೇರಿ ಚಳುವಳಿಯ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ನೇರ ದಿಟ್ಟ ಹೋರಾಟದಲ್ಲಿ ಹಲವಾರು ಜನಪರ ಕಾರ್ಯಗಳು ಯಶಸ್ವಿಗೊಂಡಿದೆ. ಈಗ ಅವರ ಹಾದಿಯಲ್ಲೇ ಪುತ್ರ ಮಧುಜಿಮಾದೇಗೌಡರು ಕೆಲಸ ನಿರ್ವಹಿಸುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದರು.
ಜಿ.ಮಾದೇಗೌಡರ ಪುತ್ರ ಮಧುಜಿಮಾದೇಗೌಡ ಅವರು ಮಾದೇಗೌಡರಂತೆಯೇ ಈ ಸಂಸ್ಥೆಯನ್ನು ಅಭಿವೃದ್ದಿಯತ್ತ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ವಿದ್ಯಾಸಂಸ್ಥೆ ಮತ್ತಷ್ಟು ಅಭಿವೃದ್ದಿಯನ್ನು ಕಾಣಲಿ ಎಂದು ಆಶಿಸಿದರು.
ಸಂಸ್ಕಾರ ಬೆಳೆಸಿಕೊಳ್ಳಿ
ರಾಮಾಯಣ ಮಹಾಭಾರತವನ್ನು ಓದುವ ಮೂಲಕ ಸಂಸ್ಕಾರ-ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ. ಕೃಷ್ಣನ ಪುಸ್ತಕವನ್ನು ಓದುವುದರಿಂದ ಮಾನವೀಯತೆ, ತ್ಯಾಗ, ಕರುಣೆ, ನಿಸ್ವಾರ್ಥ ಸೇವೆ, ಮಣ್ಣಿನ ಮತ್ತು ಮಾತೃಬಗ್ಗೆ ಗೌರವ ಬೆಳೆಸಿಕೊಳ್ಳಬಹುದು. ಮುಂದೆ ಗುರಿ, ಹಿಂದೆ ಗುರು ಇರುವವನು ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾನೆ. ನಾನು ಎಂಬ ಅಹಂಕಾರವನ್ನು ಪ್ರತಿಯೊಬ್ಬರು ತ್ಯೆಜಿಸಬೇಕೆಂದರು.
ಜಿ.ಮಾದೇಗೌಡರು ಮಾಣಿಕ್ಯ
ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಮಾತನಾಡಿ, ವ್ಯಕ್ತಿಗೆ ಸಾವು ಬರಬಹುದು, ಆದರೆ ಸಾಧನೆಗೆ ಸಾವಿಲ್ಲ ಎಂಬುವುದಕ್ಕೆ ಜಿ.ಮಾದೇಗೌಡರೇ ಸಾಕ್ಷಿಯಾಗಿದ್ದಾರೆ. ಜಿ.ಮಾದೇಗೌಡರು ಜಿಲ್ಲೆಗೆ ಮಾಣಿಕ್ಯವಿದ್ದಂತೆ ಅಂತಹ ಚರಿತ್ರೆಯಲ್ಲಿ ಹೆಸರಾಂತ ಕಾವೇರಿ ಹೋರಾಟಗಾರ ದಿ.ಜಿ.ಮಾದೇಗೌಡರ ಹೆಸರು ರಾಜ್ಯದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದರು.
13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಭಾರತೀ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಜಿಲ್ಲೆಗೆ ಹೆಮ್ಮೆ ತರುವಂತಹ ವಿಚಾರವಾಗಿದೆ. ಹಾಗಾಗಿ ವಿದ್ಯಾಥರ್ಿಗಳು ಸಂಸ್ಕಾರ-ಸಂಸ್ಕೃತಿ ಮೌಲ್ಯಗಳಿಗೆ ಹೆಚ್ಚುಒತ್ತು ನೀಡಬೇಕೆಂದರು.
ವಿಧಾನ ಪರಿಷತ್ ಸದಸ್ಯ ಮಧುಜಿಮಾದೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ತಂದೆಯ ಹಾದಿಯಲ್ಲೇ ಸಾಮಾಜಿಕ ಕಳಕಳಿಯನ್ನು ಹೊಂದಿ ಸಂಸ್ಥೆಯನ್ನು ಅಭಿವೃದ್ದಿಯತ್ತ ಕೊಂಡ್ಯೋಯುತ್ತೇನೆ. ಪಕ್ಷಾತೀತವಾಗಿ ಬಡವರ ಸೇವೆಗಾಗಿ ಶ್ರಮಿಸುತ್ತೇನೆ ಎಂದರು.
ವೇದಿಕೆಯಲ್ಲಿ ಚಲನಚಿತ್ರ ನಟಿ ರಚನಾ ಇಂದರ್, ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಕೆ.ಬಿ.ಮಹದೇವಪ್ಪ, ಟ್ರಸ್ಟಿಗಳಾದ ಪಾಪಣ್ಣ, ಎಸ್.ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ, ಡಾ.ಪಿ.ನಾಗೇಂದ್ರ, ಗ್ರಾ.ಪಂ ಅಧ್ಯಕ್ಷೆ ಕೌಶಲ್ಯ, ಕಾರ್ಯಕ್ರಮದ ಸಂಚಾಲಕರಾದ ರೇವಣ್ಣ, ಮಹದೇವಸ್ವಾಮಿ ಇದ್ದರು.