ಮಂಡ್ಯ ಜಿಲ್ಲೆಯ ಬರಪಿಂಡಿತ ತಾಲ್ಲೂಕುಗಳಲ್ಲಿ ಮುಂದಿನ ದಿವಸಗಳಲ್ಲಿ ಮೇವಿನ ಸಮಸ್ಯೆ ಉದ್ಭವಿಸಬಹುದಾಗಿದ್ದು, ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ, ಹೊರ ರಾಜ್ಯಗಳಿಗೆ ಮೇವು ಸಾಗಿಸುತ್ತಿರುವುದು ಕಂಡು ಬಂದಿದ್ದು, ಮುನ್ನಚರಿಕೆ ಕ್ರಮವಾಗಿ ಮಂಡ್ಯ ಜಿಲ್ಲೆಯಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
2023 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ The Disaster Management Act-2005 ರ ನಿಯಮ-24 (ಚಿ) ಹಾಗೂ MANUAL For Drought Management 2020 ರನ್ವಯ ಅಂತರ್ ಜಿಲ್ಲೆ, ರಾಜ್ಯಗಳಿಗೆ ಮೇವು ಸಾಗಾಣಿಕೆಯನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದ ದಿನಾಂಕದಿಂದ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಗೆ ಬರುವಂತೆ ನಿರ್ಬಂಧಿಸಿ ಆದೇಶಿಸಿದೆ.
ಜಿಲ್ಲೆಯಿಂದ ಮೇವು ಹೊರ ಜಿಲ್ಲೆಗಳಿಗೆ ಸಾಗಾಣಿಕೆ ಮಾಡುವುದಾಗಲಿ ಹಾಗೂ ಒಣ ಮೇವನ್ನು ಯಾವುದೇ ರೂಪದಲ್ಲಿ ಹೊರ ರಾಜ್ಯಗಳಿಗೆ ಸಂಸ್ಕರಿಸಿ ಸಾಗಾಣಿಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಈ ಸಂಬಂಧ ಅವಶ್ಯಕವಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ತಾಲ್ಲೂಕಿನ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ.
ಮೇವು ಸಾಗಾಣಿಕೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕಿನ ದಂಡಾಧಿಕಾರಿಗಳು ಮತ್ತು ಪೊಲೀಸ್ ನಿರೀಕ್ಷಕರುಗಳು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಹಾಗೂ ಹೊರ ಜಿಲ್ಲೆಗಳಲ್ಲಿನ ಮೇವು ಸಾಗಾಣಿಕೆಯಲ್ಲಿ ನಿರ್ಬಂಧಿಸುವಲ್ಲಿ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.