ಮಂಡ್ಯದಲ್ಲಿ ಬಿಸಿಲಿನ ತಾಪ 37 ಡಿಗ್ರಿ ದಾಟಿದ್ದು ರೈತರು ಬೆಳೆದ ಬೆಳೆಗಳು ಒಣಗುತ್ತಿದ್ದು,ಕೂಡಲೇ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆಬ್ಬಳ್ಳಿ ಕೆ.ಪಿ.ಮಂಜುನಾಥ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಬಿಸಿಲಿನ ತಾಪದಿಂದಾಗಿ ಬೆಳೆಗಳು ಒಣಗಿ,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೆರೆ ಕಟ್ಟೆಯಲ್ಲಿನ ನೀರು ಬತ್ತಿಹೋಗಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ.ಅಲ್ಲದೆ ಜನ-ಜಾನುವಾರುಗಳಿಗೂ ತೀವ್ರ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಕೂಡಲೇ ಗಮನಹರಿಸಿ ತುರ್ತಾಗಿ ವಿ.ಸಿ ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ಕೈ ಹಿಡಿಯಬೇಕೆಂದು ಮಂಡ್ಯ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದೇನೆ ಎಂದರು.
ಈ ಕೂಡಲೇ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ ಜನ-ಜಾನುವಾರುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಟ್ಟು ಪದ್ದತಿಯಲ್ಲಿ ನೀರು ಹರಿಸುವುದಾಗಿ ಹೇಳಿದರೂ ನಿಗದಿತ ಸಮಯದಲ್ಲಿ ನೀರು ಹರಿಸುತ್ತಿಲ್ಲ.ಇದರಿಂದಾಗಿ ಕೊನೆಯ ಭಾಗಕ್ಕೆ ನೀರು ಬರುತ್ತಿಲ್ಲ.ಇದರಿಂದ ಬೆಳೆಗಳು ನೀರಿಲ್ಲದೆ ನಾಶವಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಬ್ಬಳ್ಳಿ ಹರೀಶ್,ಪಣಕನಹಳ್ಳಿ ಧನಂಜಯ ಉಪಸ್ಥಿತರಿದ್ದರು.