ಮಂಡ್ಯ ತಾಲ್ಲೂಕು ಕೀಲಾರ ಗ್ರಾಮದಲ್ಲಿ ನಾಲ್ವರು ಸಹೋದರರಿರುವ ಮನೆಯಲ್ಲಿ ಒಟ್ಟು 32 ಜಾನುವಾರುಗಳು ಸಾವಿಗೀಡಾಗಿದ್ದು, ಸಂತ್ರಸ್ಥರ ಕುಟುಂಬ ಸೇರಿದಂತೆ ಇಡೀ ಗ್ರಾಮದಲ್ಲಿ ಆತಂಕ ಮೂಡಿಸಿದೆ.
ಕಳೆದ 5 ವರ್ಷಗಳಿಂದೀಚೆಗೆ ನಮ್ಮ ಮನೆಯಲ್ಲಿ 32 ಜಾನುವಾರುಗಳು ಸಾವಿಗೀಡಾಗಿವೆ, ಆದರೆ ಅದು ಏಕೆ ? ಎಂಬುದು ಇದವರೆಗೂ ಪತ್ತೆಯಾಗಿಲ್ಲ, ಜಾನುವಾರುಗಳನ್ನು ಸಾಕುವುದಕ್ಕಾಗಿ ಚಿನ್ನಾಭರಣವನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಮಾಡಿದ್ದೇನೆ, ಸರ್ಕಾರವಾಗಲಿ, ಜಿಲ್ಲಾಡಳಿವಾಗಲಿ ನನ್ನ ನೆರವಿಗೆ ಧಾವಿಸಿಲ್ಲ ಎಂದು ರೈತ ಶಂಕರೇಗೌಡ ”ನುಡಿ ಕರ್ನಾಟಕ.ಕಾಂ” ನೊಂದಿಗೆ ಮಾತನಾಡಿ ಅಳಲು ತೋಡಿಕೊಂಡರು.
ಪಶುಪಾಲನ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುತ್ತಾರೆ, ಹೋಗುತ್ತಾರೆ, ನಮ್ಮ ಮನೆಯಲ್ಲಿ ಜಾನುವಾರುಗಳ ಸಾವು ನಿಂತಿಲ್ಲ, ಇಂದು ಕೂಡ ₹30 ಸಾವಿರ ಮೌಲ್ಯದ ಹಸು ಸಾವಿಗೀಡಾಗಿದೆ ಎಂದು ಕಂಗಾಲಾದರು.
ಕಳೆದ 15 ದಿನಗಳಿಂದೀಚೆಗೆ ₹ 25 ಸಾವಿರ ಮೌಲ್ಯದ ಒಂದು ಸೀಮೆಹಸು ಹಾಗೂ ಹಳ್ಳಕಾರ್ ತಳಿಯ ಉಳಮೆ ಮಾಡುವ ಜೋಡಿ ಹಸುಗಳಲ್ಲಿ ಒಂದು ಹಸು, ಸಾವನ್ನಪ್ಪಿದೆ, ಭಾನುವಾರ (ಇಂದು) ಸಂಜೆ 4 ಗಂಟೆಯ ವೇಳೆಗೆ ಹೆಚ್.ಎಫ್ ತಳಿಯ ಹಾಲು ಕೊಡುವ ಹಸು ಸಾವಿಗೀಡಾಗಿದೆ ಎಂದು ವಿವರಿಸಿದರು.
ಪಶು ವೈದ್ಯಾಧಿಕಾರಿಗಳು ಹೇಳುವುದೇನು ?
ಈ ಘಟನೆಗೆ ಬಗ್ಗೆ”ನುಡಿ ಕರ್ನಾಟಕ.ಕಾಂ” ಮಾತನಾಡಿದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಶಿವಯ್ಯ ಅವರು, ಕೀಲಾರ ಗ್ರಾಮದಲ್ಲಿ ನಡೆಯುತ್ತಿರುವ ಈ ಘಟನೆ ನಮ್ಮ ಗಮನಕ್ಕೆ ಬಂದಿದೆ, ನಾವು ಸೇರಿದಂತೆ ಮೇಲಿನ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾಕಷ್ಟು ಬಾರಿ ಪರಿಶೀಲಿಸಿದ್ದೇವೆ, ಅಲ್ಲದೇ ಸಾವಿಗೀಡಾದ ಸ್ಯಾಂಪಲ್ ಗಳನ್ನು ಸರ್ಕಾರಿ ಪ್ರಯೋಗಾಲಯಗಳಿಗೆ ಕಳಿಸಿ ಪರೀಕ್ಷಿಸಲಾಗಿದೆ, ಅದರಲ್ಲಿ ”ಅಮೋನಿಯಂ ಟಾಕ್ಸಿಟಿ” (Ammonium toxicity) ಎಂಬ ವಿಷಾಕಾರಿ ಅಂಶ ಪತ್ತೆಯಾಗಿದೆ. ಇದು ಯಾವುದರ ಮೂಲಕ ಜಾನುವಾರುಗಳ ಉದರ ಸೇರುತ್ತಿದೆ ಎಂಬುದು ನಮಗೆ ತಿಳಿದು ಬಂದಿಲ್ಲ, ನಮ್ಮ ಇಲಾಖೆ ಮೇಲಾಧಿಕಾರಿಗಳು ಜರ್ಮಿನಿಗೂ ಕಳಿಸಿ ಸ್ಯಾಪಲ್ ಗಳನ್ನು ಪರೀಕ್ಷಿಸಿದ್ದಾರೆ, ಅದರಲ್ಲೂಈ ವಿಷಾಕಾರಿ ಅಂಶ ಪತ್ತೆಯಾಗಿದೆ ಎಂದು ವಿವರಿಸಿದರು.
ಕಳೆದ 5 ವರ್ಷಗಳಿಂದ ಜಾನುವಾರುಗಳ ಸರಣಿ ಸಾವಿನಿಂದಾಗಿ ತಾವು ಸಾಲದ ಸುಳಿಗೆ ಸಿಲುಕಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಕೂಡಲೇ ತಮ್ಮ ನೆರವಿಗೆ ಧಾವಿಸಬೇಕೆಂದು ಸಂತ್ರಸ್ತ ಶಂಕರೇಗೌಡ ಮನವಿ ಮಾಡಿದ್ದಾರೆ.