ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮದಲ್ಲಿ ನಡೆದಿರುವ ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಕ್ಷಣದಲ್ಲೇ ಆರೋಪಿಯ ಮೇಲೆ ವಿಚಾರಣೆಯನ್ನು ವೇಗಗೊಳಿಸಿ, ಬೇಗನೇ ಶಿಕ್ಷೆ ನೀಡಬೇಕು ಅತ್ಯಾಚಾರ ವಿರೋಧಿ ಆಂದೋಲನದ ಆಗ್ರಹಪಡಿಸಿದೆ.
ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಮತ್ತು ವಿಸ್ತೃತವಾಗಿ ಜಾಗೃತಿ ಅಭಿಯಾನವನ್ನು ಕೈಗೊಳ್ಳಬೇಕೆಂದು ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಪ್ರಕಟಣೆಯಲ್ಲಿ ಒತ್ತಾಸಿದ್ದಾರೆ.
ಪಾಂಡವಪುರ ತಾಲೂಕು ಕಟ್ಟೇರಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್ಎಂಎಸ್ಎ) ಅಡಿಯಲ್ಲಿ ಕಾರ್ಯ ನಿರ್ವಹಿಸುವ ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕ ಚಿನ್ಮಯಾನಂದ ಮೂರ್ತಿ ನಿರಂತರವಾಗಿ ವಿದ್ಯಾರ್ಥಿನಿಯರ ಮೇಲೆ ಮತ್ತು ಶಿಕ್ಷಕಿಯರ ಮೇಲೆ ಲೈಂಗಿಕ ಕಿರುಕುಳ
ನೀಡುತ್ತಿದ್ದುದರಿಂದ ರೋಸಿಹೋದ ವಿದ್ಯಾರ್ಥಿನಿಯರು ರೊಚ್ಚಿಗೆದ್ದು ದೊಣ್ಣೆಗಳನ್ನು ಹಿಡಿದು ಈ ವಿಕೃತ ವ್ಯಕ್ತಿಯನ್ನು ಥಳಿಸಿದ್ದಾರೆ. ಈಗಾಗಲೇ ಈತನ ಬಗ್ಗೆ ಲೈಂಗಿಕ ಕಿರುಕುಳದ ಆರೋಪಗಳಿದ್ದರೂ ನಿರ್ಲಕ್ಷ್ಯ ವಹಿಸಿದದ್ದೇ ಇಂತಹ ಘಟನೆಗೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.
ಪ್ರತಿನಿತ್ಯ ವಿದ್ಯಾರ್ಥಿನಿ ನಿಲಯದಲ್ಲೂ ಶಾಲೆಯಲ್ಲೂ ಈತನಿಂದ ಕಿರುಕುಳ ಅನುಭವಿಸಿ ಬೇಸತ್ತ ವಿದ್ಯಾರ್ಥಿನಿಯರು ರೊಚ್ಚಿಗೆದ್ದ ನಂತರವೇ ಈ ಘಟನೆಗೆ ಇಷ್ಟೆಲ್ಲ ಹಿನ್ನೆಲೆಯಿರುವುದು ಹೊರಜಗತ್ತಿನ ಗಮನಕ್ಕೆ ಬಂದಿದೆ. ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಈ ಘಟನೆಯ ನಂತರ ದಾಖಲಾಗಿರುವ ದೂರಿನಲ್ಲಿ ವಿದ್ಯಾರ್ಥಿನಿಯರು ಮಾತ್ರವಲ್ಲದೇ ಸಹಶಿಕ್ಷಕಿಯರಿಗೂ ಕಿರುಕುಳ ನೀಡಿದ್ದಾಗಿ ಹೇಳಲಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಜಿಲ್ಲಾಡಳಿತ ಆರೋಪಿ ಮುಖ್ಯ ಶಿಕ್ಷಕನ ವಿರುದ್ಧ ವಿಚಾರಣೆ ತೀವ್ರಗೊಳಿಸಿ, ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.