ಶಿವರಾಮೇಗೌಡರು ನೇರ ನಡೆ ನುಡಿಯ ರಾಜಕಾರಣಿ.ಅವರಿಗೆ ಅಡ್ಜಸ್ಟಮೆಂಟ್ (ಹೊಂದಾಣಿಕೆ) ರಾಜಕಾರಣ ಮಾಡುವ ಅವಶ್ಯಕತೆಯಿಲ್ಲ ಎಂದು ಮುಖಂಡ ಎಲ್.ಎಸ್.ಚೇತನ್ ಗೌಡ ತಿಳಿಸಿದರು.
ನಾಗಮಂಗಲ ತಾಲ್ಲೂಕಿನ ಕದಬಳ್ಳಿಯ ಕಾವೇಟಿ ರಂಗನಾಥ ದೇವಾಲಯದ ಆವರಣದಲ್ಲಿ ನಡೆದ ಎಲ್ಆರ್ ಎಸ್ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಅಧಿಕಾರವನ್ನು ಕಳೆದುಕೊಂಡು ಇಪ್ಪತ್ತೈದು ವರ್ಷಗಳು ಕಳೆದರೂ ತಾಲೂಕಿನ ಜನರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ.ಈ ಕಾರಣದಿಂದ ನಮ್ಮ ಕ್ಷೇತ್ರದ ಜನರು ಬೆಂಗಳೂರಿನ ನಮ್ಮ ನಿವಾಸಕ್ಕೆ ಬಂದು ಮುಂಬರುವ ಚುನಾವಣೆಯಲ್ಲಿ ನೀವು ನಾಗಮಂಗಲದಿಂದ ಸ್ಪರ್ಧಿಸಿ ನಮ್ಮ ಕಷ್ಟಗಳನ್ನು ನಿವಾರಿಸಿ ಕೊಡಬೇಕು ಎಂದು ಕೇಳಿಕೊಂಡ ಸಂದರ್ಭದಲ್ಲಿ ಆಯ್ತು, ನಿಮ್ಮೆಲ್ಲರ ಅಭಿಪ್ರಾಯದಂತೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿ, ಕಳೆದ ಒಂದೂವರೆ ವರ್ಷಗಳಿಂದ ನಾನು ನನ್ನ ತಂದೆ ಸತತವಾಗಿ ಕ್ಷೇತ್ರದ ಪ್ರವಾಸದಲ್ಲಿ ತೊಡಗಿ, ಜನರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇವೆ ಎಂದರು.
ಜನಾಭಿಪ್ರಾಯದಂತೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ.ಎಷ್ಟೇ ರಾಜಕೀಯ ಕುತಂತ್ರಗಳು ನಡೆದರೂ ನಾಗಮಂಗಲ ತಾಲೂಕಿನಲ್ಲಿ ನನ್ನ ತಂದೆ ಮತ್ತು ನಾನು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ, ಜನಗಳ ಆಶೀರ್ವಾದದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಜನರು ಎಲ್ ಆರ್ ಎಸ್ ಸ್ವಾಭಿಮಾನಿ ಪರ್ವವನ್ನು ಆರಂಭ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಮ್ಮ ತಾಲ್ಲೂಕಿನ ಜನರು ಕೈ ಹಿಡಿದು ಮತ ನೀಡಿ ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ. ಅದಕ್ಕೆ ಸಾಕ್ಷಿ ಇಂದು ಸ್ವಾಭಿಮಾನಿ ಪರ್ವ ದಲ್ಲಿರುವ ಮತದಾರರು, ಇವರೆಲ್ಲರೂ ಯಾವುದೇ ನಿರೀಕ್ಷೆ ಇಟ್ಟುಕೊಂಡು ಬಂದವರಲ್ಲ. ನನ್ನ ತಂದೆಯ ಮೇಲೆ ಇರುವ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ ಬಂದಿರುವ ಜನರೇ ಹೊರತು ಇನ್ಯಾವುದೇ ಆಶೆ, ಆಮಿಷಗಳಿಗೆ ಒಳಗಾಗಿ ಬಂದವರಲ್ಲ. ನಮ್ಮ ಕ್ಷೇತ್ರದ ಜನರು ನಾವು ಸ್ವಾಭಿಮಾನಿಗಳೇ ಎಂಬುದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಮುಖಂಡರಾದ ಮಂಜೇಗೌಡ,ಟಿ.ಕೆ ರಾಮೇಗೌಡ, ಪಾಳ್ಯ ರಘು, ಚೇತನ್ ತುರುಬನಹಳ್ಳಿ, ಪ್ರಕಾಶ್,ಕೃಷ್ಣಮೂರ್ತಿ, ಪ್ರದೀಪ್ ಸೇರಿದಂತೆ ಕದಬಳ್ಳಿ ಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.