ಜಾತೀಯತೆ, ಧರ್ಮ ಸಂಘರ್ಷಗಳು ನಿರಂತರವಾಗಿರುವ ಇಂದಿನ ದಿನಗಳಲ್ಲಿ, ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಹುಟ್ಟು ಹಾಕುವ ಉದ್ಧೇಶದಿಂದ ನ.19 ಹಾಗೂ 20ರಂದು ಅಪ್ಪು ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.
ಅಪ್ಪು ಜನೋತ್ಸವದ ಅಂಗವಾಗಿ ಮಂಗಳವಾರ ಮಂಡ್ಯನಗರದ ಸಂಜಯ ವೃತ್ತದಲ್ಲಿ ಡಾ.ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಪ್ಪು ಅವರ ಮಾನವೀಯತೆ, ಗುಣ-ಆದರ್ಶಗಳು, ಸಮಾಜದ ಆದರ್ಶಗಳಾಗಬೇಕು. ಅಪ್ಪು ಅವರ ಸಮಾಜಸೇವೆ ಎಲ್ಲರಿಗೆ ಮಾದರಿಯಾಗಿದೆ. ಅವರ ಮೇಲಿನ ಅಭಿಮಾನಕ್ಕೆ ಸಮಾಜವನ್ನು ಬದಲಾವಣೆ ಮಾಡುವ ಶಕ್ತಿ ಇದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಯುವ ಜನರ ತಲೆ ಜಾತಿ, ಮತ, ಧರ್ಮಗಳೆಂಬ ಅಮಲನ್ನು ಕೆಲವು ಸಂಘಟನೆಗಳು ತುಂಬುತ್ತಿವೆ, ಅದರಿಂದ ಯುವ ಜನರನ್ನು ಹೊರ ತರಲು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಶ್ರಮಿಕರ ನಾಯಕತ್ವದಲ್ಲಿ ಅಪ್ಪು ಜನೋತ್ಸವವನ್ನು ಸಂಘಟಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹುಲ್ಕರೆ ಮಹಾದೇವ, ಕನ್ನಡ ಸಂಘಟನೆಗಳ ಮುಖಂಡರಾದ ಚಿದಂಬರಂ, ಜಯರಾಂ, ಶಂಕರೇಗೌಡ, ಬಿಜೆಪಿ ಮುಖಂಡ ರಮೇಶ್, ಕಸಾಪದ ಧರೇಣೇಂದ್ರಯ್ಯ, ಹಿಂದಿ ಪ್ರಚಾರ ಸಮಿತಿಯ ಎಸ್. ವಿನಯ್ ಕುಮಾರ್, ಸ್ಮಾರ್ಟ್ ಅಕಾಡೆಮಿಯ ಸಲೀಂ ಅಹಮದ್ ಹಾಗೂ ಥಾಮಸ್ ಬೆಂಜಾಮಿನ್ ಸೇರಿದಂತೆ ಹಲವರಿದ್ದರು.