ಅರಣ್ಯ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಮೂಲಕ ನಮ್ಮ ಕಾಡುಗಳನ್ನು ಸಂರಕ್ಷಿಸುವಲ್ಲಿ ನಾವೆಲ್ಲರೂ ಒಟ್ಟಾಗಿ ಪಾಲ್ಗೊಳ್ಳೋಣ ಎಂದು ಉಪ ವಲಯ ಅರಣ್ಯ ಅಧಿಕಾರಿ ಕಾವ್ಯ ಹೇಳಿದರು.
ಮಳವಳ್ಳಿ ಪಟ್ಟಣದ ನ್ಯೂ ಲೈಫ್ ಇಂಟರ್ನ್ಯಾಷನಲ್ ಬೋರ್ಡಿಂಗ್ ಸ್ಕೂಲ್ ನಲ್ಲಿ ನಡೆದ ಅರಣ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯವೆಂದರೆ ಅದು ಸಸ್ಯ ಸಂಪತ್ತು, ಸಾವಿರಾರು ಜಾತಿಯ ಮರಗಳು ಪ್ರಾಕೃತಿಕವಾಗಿ ಬೆಳೆದು ಲಕ್ಷಾಂತರ ಜೀವ ವೈವಿಧ್ಯ ಸೂಕ್ಷ್ಮಾಣುಗಳೊಂದಿಗೆ ರೂಪುಗೊಂಡಿರುವ ತಾಣವಾಗಿದೆ ಎಂದರು.
ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ, ಪ್ರಸ್ತುತ ಇಡೀ ಪ್ರಾಕೃತಿಕ ಪರಿಸರವನ್ನೆ ಹಾಳು ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಅರಣ್ಯಗಳಲ್ಲಿ ರಸ್ತೆಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ಜಲ ವಿದ್ಯುತ್ ಘಟಕಗಳ ಸ್ಥಾಪನೆಯೂ ಅರಣ್ಯದ ಮೇಲೆಯೇ ಅನಗತ್ಯ ಒತ್ತಡ ಹುಟ್ಟು ಹಾಕುತ್ತದೆ ಎಂದು ತಿಳಿಸಿದರು.
ಶಾಲೆಯ ಮಕ್ಕಳು ಪರಿಸರ ವಿಷಯಕ್ಕೆ ಕುರಿತು ಜಾಗೃತಿ ಪ್ರದರ್ಶನವನ್ನು ನೀಡಿದರು. ಶಾಲೆಯ ಟ್ರಸ್ಟ್ ನ ಪುಟ್ಟಸ್ವಾಮಿ, ಸಿದ್ದಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಬೋಧಕೇತರರು ಹಾಜರಿದ್ದರು.