ಮಾಜಿ ಸಂಸದ ಜಿ.ಮಾದೇಗೌಡ ಅವರ ಮೊಮ್ಮಗ ಆಶಯ್ ಮಧು ಅವರ ಅಭಿಮಾನಿಗಳ ಬಳಗದ ವತಿಯಿಂದ ಜ.17 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ, ಪ್ರಕೃತಿ ಮತ್ತು ಯೋಗ ಚಿಕಿತ್ಸೆ ಹಾಗೂ ದಂತ ಚಿಕಿತ್ಸಾ ಶಿಬಿರವು ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ ಎಂದು ಕೊಕ್ಕರೆ ಬೆಳ್ಳೂರು ಗ್ರಾ.ಪಂ ಅಧ್ಯಕ್ಷ ಕೆಂಪರಾಜು ತಿಳಿಸಿದರು.
ಕೊಕ್ಕರೆ ಬೆಳ್ಳೂರು ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಆಶಯ್ ಮಧುಮಾದೇಗೌಡರ ಬಳಗದ ವತಿಯಿಂದ ಆರ್.ವಿ ದಂತ ಕಾಲೇಜು ಮತ್ತು ಆಸ್ಪತ್ರೆ ಬೆಂಗಳೂರು, ಜಿ.ಮಾದೇಗೌಡ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಅಂಡ್ ಯೋಗವಿಜ್ಞಾನ ಕಾಲೇಜು ಭಾರತೀನಗರ, ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಭಾರತೀನಗರ, ಕೆ.ಬೆಳ್ಳೂರು ಗ್ರಾಮಪಂಚಾಯಿತಿ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ, ಪ್ರಕೃತಿ ಮತ್ತು ಯೋಗ ಚಿಕಿತ್ಸೆ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಭಾರತೀ ಕಾಲೇಜು ಉಪನ್ಯಾಸಕ ಡಾ.ಬಾಬು ಮಾತನಾಡಿ, ಈ ಶಿಬಿರದಲ್ಲಿ ಮೂಳೆ ಮತ್ತು ಕೀಲುನೋವು, ಸ್ತ್ರೀರೋಗ ಮತ್ತು ಪ್ರಸೂತಿ ಹಾರೈಕೆ, ಹೃದಯ ಸಂಬಂಧಿಸಿದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಥೈರಾಯ್ಡ್ ಸಮಸ್ಯೆ, ಗ್ಯಾಸ್ಟ್ರಿಕ್, ಮಲಬದ್ದತೆ, ಪೈಲ್ಸ್, ಮುಟ್ಟಿನ ಸಮಸ್ಯೆ, ಅಜೀರ್ಣ, ಮಾನಸಿಕ ಸಮಸ್ಯೆ, ಮಂಡಿನೋವು, ಬೆನ್ನುನೋವು, ಕೀಲುನೋವು ಹಾಗೂ ಬಾಯಿ, ವಸಡು, ಹಲ್ಲು ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ ಎಂದರು.
3 ಮತ್ತು 3 ಕ್ಕಿಂತ ಹೆಚ್ಚಿನ ಹಲ್ಲುಗಳನ್ನು ಕಳೆದುಕೊಂಡಿರುವ 45 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರಿಗೆ ಉಚಿತ ಕೃತಕ ಹಲ್ಲಿನ ಸೆಟ್ ಗಳಿಗಾಗಿ ನೋಂದಣಿ ಮಾಡಿಕೊಳ್ಳಲಾಗುವುದು. ಉಚಿತವಾಗಿ ಬಿಪಿ, ಸಕ್ಕರೆ ಪರೀಕ್ಷೆ ಮತ್ತು ಇಸಿಜಿ ಮಾಡಲಾಗುವುದು. ಈ ಶಿಬಿರದಲ್ಲಿ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9986171758, 9448557635, 9449118242 ಗೆ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಡೇರಿ ಮಾಜಿ ಅಧ್ಯಕ್ಷ ಬನ್ನಹಳ್ಳಿ ಶಿವಲಿಂಗೇಗೌಡ, ಮುಖಂಡರಾದ ಬಿ.ಪಿ.ಅಪ್ಪಾಜೀಗೌಡ, ಬಿ.ಕೆ.ಕೃಷ್ಣ, ಬಿ.ಟಿ.ಕಾವೇರಿಗೌಡ, ರಾಜು, ಅಣ್ಣೂರು ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್ಚಂದ್ರ, ಹಾಗಲಹಳ್ಳಿ ಪುಟ್ಟಸ್ವಾಮೀಗೌಡ, ಕೂಳಗೆರೆ ಜಯರಾಮು, ಗಿರೀಶ್ ಸೇರಿದಂತೆ ಹಲವರಿದ್ದರು.