ಸತ್ಯ -ಅಹಿಂಸೆ-ಶಾಂತಿ -ಸ್ವದೇಶೀ ಪರಿಕಲ್ಪನೆಯ ಜೊತೆಗೆ ‘ಮಾಡು ಇಲ್ಲವೇ ಮಡಿ’ ಘೋಷವಾಕ್ಯ ನೀಡಿದವರು ಗಾಂಧೀಜಿಯವರದಾದರೆ, ಪ್ರಾಮಾಣಿಕತೆ-ಸ್ವಾಭಿಮಾನ -ಸರಳತೆ-ಬದ್ಧತೆ -ದಿಟ್ಟ ನಿರ್ಧಾರಗಳ ಜೊತೆಗೆ ‘ಜೈ ಜವಾನ್ -ಜೈ ಕಿಸಾನ್ ‘ಘೋಷವಾಕ್ಯ ನೀಡಿ ಹೆಸರಾದವರು ಶಾಸ್ತ್ರೀಜಿಯವರು, ಅವರ ಆದರ್ಶ ಗುಣಗಳು ಇಂದಿನ ಯುವಜನರಿಗೆ ಮಾದರಿ ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ ಸ್ಮರಿಸಿದರು.
ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ಪಶ್ಚಿಮ ವಾಹಿನಿಯ ಕಾವೇರಿ ನದಿ ತಟದಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಸಮರ್ಪಿಸಿರುವ ಸ್ಥಳದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜೀ ಅವರ ಜನನದಿಂದ -ಮರಣದವರೆಗಿನ ಜೀವನ ಚರಿತ್ರೆಯ ಬಗ್ಗೆ ಎಳೆ-ಎಳೆಯಾಗಿ ವಿವರವಾಗಿ ಗುಣಗಾನ ಮಾಡಿದರು.
ಇಂದಿನ ಪರಿಸ್ಥಿತಿಯಲ್ಲಿ ಗಾಂಧಿಜೀಯವರ ಸಿದ್ಧಾಂತ ಮತ್ತು ಶಾಸ್ತ್ರೀಜೀಯವರ ಸ್ವಾಭಿಮಾನದ ದಿಟ್ಟ ನಿರ್ಧಾರಗಳು ಅತ್ಯಾವಶ್ಯಕವಾಗಿವೆ ಎಂದರಲ್ಲದೇ, ಇವರ ಜೀವನ ಕ್ರಮ ಮತ್ತು ಸಿದ್ದಾಂತವನ್ನು ಅನುಸರಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉಪಸ್ಥಿತರಿದ್ದವರೆಲ್ಲ ಸೇರಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿದರು, ನಂತರ ಭಜನೆ ಮಾಡುವ ಮೂಲಕ ವಿಶೇಷವಾಗಿ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸರಸ್ವತಿ, ಅರಕೆರೆ ಹೋಬಳಿ ಘಟಕದ ಅರಕೆರೆ ರಾಮಕೃಷ್ಣ, ಕಸಬಾ ಹೋ. ಘಟಕದ ಚಂದಗಾಲು ಶಂಕರ್, ತಾಲೂಕು ಪದಾಧಿಕಾರಿಗಳಾದ ನಳಿನಿ, ಮಂಜುಶ್ರೀ, ದೀಪು, ಶಿವಸ್ವಾಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಲಹಳ್ಳಿ ಮುಕುಂದ ,ಟೆಂಪೋ ಪ್ರಕಾಶ್, ಬಾಬು, ಲೋಕೇಶ್, ದಿನೇಶ್, ಯೋಗೇಶ್, ಬಿ ಎಂ ಎಸ್ ವಾಸುದೇವ, ಪ್ರೀತಮ್, ರಾಮಣ್ಣ, ಸೋಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.