Friday, September 20, 2024

ಪ್ರಾಯೋಗಿಕ ಆವೃತ್ತಿ

ವೈದ್ಯರ ನಿಯಂತ್ರಣ ಮೀರಿ ಹೋಗುತ್ತಿರುವ ಆರೋಗ್ಯ ಕ್ಷೇತ್ರ……..

ವಿವೇಕಾನಂದ ಎಚ್.ಕೆ.

ವೈದ್ಯರ ದಿನದ ಸಂದರ್ಭದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಯ ಬಗ್ಗೆ ನಾವು ಯೋಚಿಸಬೇಕಿದೆ.

ಸಾಮಾನ್ಯವಾಗಿ ಅತ್ಯಂತ ಹೆಚ್ಚಿನ ಶ್ರಮದ ಓದು ಎಂದರೆ ಅದು ಡಾಕ್ಟರ್ ಆಗುವ ಪ್ರಕ್ರಿಯೆಯ ಓದು ಮತ್ತು ಅಧ್ಯಯನ. ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ಮೊದಲ ಆಯ್ಕೆ ವೈದ್ಯಕೀಯ ವಿಜ್ಞಾನ. ಇತ್ತೀಚಿಗೆ ಸ್ವಲ್ಪ ಬದಲಾವಣೆ ಆಗುತ್ತಿದೆ.

ಸಮಾಜದಲ್ಲಿ ಸಹಜವಾಗಿಯೇ ಹೆಚ್ಚು ಗೌರವ ಪಡೆಯುವ ವೃತ್ತಿ ಸಹ ವೈದ್ಯರದು. ಹಾಗೆಯೇ ಸಾವು ಬದುಕಿನ ಅತ್ಯಂತ ನಿರ್ಣಯಾತ್ಮಕ ಸಮಯದ ಕ್ಷಣದ ಹೊಣೆಗಾರಿಕೆಯೂ ವೈದ್ಯರದು. ಇಂತಹ ಮಹತ್ವದ ವೃತ್ತಿ ಈ‌ ಸ್ಪರ್ಧಾತ್ಮಕ ಹಣಕಾಸಿನ ಸಮಾಜದಲ್ಲಿ ವೈದ್ಯರ ಕೈ ತಪ್ಪುತ್ತಿರುವುದು ತುಂಬಾ ಅಪಾಯಕಾರಿ.

ವೈದ್ಯರಲ್ಲದ ಕಾರ್ಪೊರೇಟ್ ಬಂಡವಾಳಗಾರರು ಸೇವೆ, ಶಿಸ್ತು, ಸ್ವಚ್ಚತೆಯ ಹೆಸರಿನಲ್ಲಿ ಬಹುತೇಕ ಜನರನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಕರೆಯಬಹುದಾದಷ್ಟು ಶೋಷಿಸುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣ, ಲ್ಯಾಬೊರೇಟರಿ, ‌ಔಷಧಿಗಳು, ಶಸ್ತ್ರಚಿಕಿತ್ಸೆಗಳು, ಜೀವ ವಿಮೆ, ತಪಾಸಣಾ ಶಿಬಿರಗಳು, ಐಸಿಯು, ಡಾಕ್ಟರ್ ಕನ್ಸಲ್ಟನ್ಸಿ ಸರ್ವೀಸಸ್, ಆಹಾರದ ಡಯಟ್, ಆಂಬುಲೆನ್ಸ್ ಸೇವೆ, ಹೀಗೆ ಸಾಲು ಸಾಲು ಆರೋಗ್ಯ ವಿಭಾಗಗಳಲ್ಲಿ ಹಣವೇ ಪ್ರಾಧಾನ್ಯತೆ ಪಡೆದು ವಂಚನೆಯ ಅನುಮಾನ ಬಲವಾಗುತ್ತಿದೆ.

” ವೈದ್ಯಕೀಯ ವಿಜ್ಞಾನ ಮುಂದುವರೆದಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ” ಎಂಬ ಮಾತು ಚಾಲ್ತಿಯಲ್ಲಿದೆ. ಅಂದರೆ ವೈದ್ಯಕೀಯ ಮಾಫಿಯಾ ಬಲವಾಗಿ ಕೆಲಸ ಮಾಡುತ್ತಿದೆ ಎಂದು ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಿದ್ದಾರೆ.

” ವೈದ್ಯರು ಈಗಲೂ ಸಂಪೂರ್ಣ ನಂಬಿಕೆಗೆ ಅರ್ಹರು ಆದರೆ ಆಸ್ಪತ್ರೆಗಳಲ್ಲ ” ಎಂದು ಹಿರಿಯ ಚಿಂತಕರೊಬ್ಬರು ಅಭಿಪ್ರಾಯ ಪಡುತ್ತಾರೆ. ಅಂದರೆ ವೈದ್ಯರನ್ನು ಮೀರಿದ ಒಂದು ದಂಧೆ ತುಂಬಾ ಸಕ್ರೀಯವಾಗಿದೆ ಎಂದು ಭಾಸವಾಗುತ್ತಿದೆ.

ವಿಷಯುಕ್ತ ನೀರು ಗಾಳಿ ಆಹಾರ, ಅತಿ ಕಡಿಮೆ ದೇಹ ದಂಡನೆ, ವಿಪರೀತ ಮಾನಸಿಕ ಒತ್ತಡ, ಅತಿಯಾದ ದುರಾಸೆಗಳು ಮುಂತಾದ ಹಲವಾರು ಕಾರಣಗಳಿಂದ ಅನಿರೀಕ್ಷಿತ ಸಾವುಗಳು ಹೆಚ್ಚಾಗುತ್ತಿವೆ. ಸಂಪರ್ಕ ಕ್ರಾಂತಿಯ ಫಲವಾಗಿ ಅನೇಕ ಆರೋಗ್ಯದ ಸಲಹೆಗಳು ನಿಜ ಸುಳ್ಳುಗಳ ಭೇದವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಜನರಲ್ಲಿ ಜಾಗೃತಿಗಿಂತ ಹೆಚ್ಚಾಗಿ ಭಯ ಉಂಟಾಗಿ ಆಸ್ಪತ್ರೆಗಳ ಮೇಲೆ ಅವಲಂಬನೆ ಜಾಸ್ತಿಯಾಗಿದೆ. ಅದರ ಪರಿಣಾಮ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಾಗಿ ಬಹುತೇಕ ಆಸ್ಪತ್ರೆಗಳಿಗೆ ಪೂರ್ವಾನುಮತಿ ಪಡೆದೇ ಹೋಗಬೇಕಿದೆ. ಅದರ ನಂತರವೂ ಉದ್ದದ ಸರತಿ‌ ಸಾಲಿನಲ್ಲಿ ನಿಲ್ಲಬೇಕಿದೆ. ಇದು‌ ಕಾರ್ಪೊರೇಟ್ ಜನರಿಗೆ ವ್ಯಾಪಾರದ ಬಾಗಿಲು ತೆರೆಯುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇದ್ದ ಸಣ್ಣ ಸಣ್ಣ ಕ್ಲಿನಿಕ್ ಗಳು ಇಂದು ಕಡಿಮೆಯಾಗಿ ಎಲ್ಲಾ ಕಡೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು 5 ಸ್ಟಾರ್ ಹೋಟೆಲುಗಳಂತೆ ತಲೆ ಎತ್ತಿವೆ. ಇದರ ಪರಿಣಾಮ ಅಂದು ವೈದ್ಯರಲ್ಲಿದ್ದ ಸೇವಾ ಮನೋಭಾವ ಕಡಿಮೆಯಾಗಿ ಅವರು ಸಹ ಕಾರ್ಪೊರೇಟ್ ಧಣಿಗಳ ಕೈಗೊಂಬೆಗಳಾಗಿ ಟಾರ್ಗೆಟ್ ಅಡಿಯಲ್ಲಿ ಕೆಲಸ ಮಾಡಬೇಕಾಗಿದೆ.

ವೈದ್ಯರನ್ನು ಕಾರ್ಪೊರೇಟ್ ದಗಾಕೋರರ ಮಡಿಲಿಗೆ – ಹಿಡಿತಕ್ಕೆ ದೂಡದಿರೋಣೋ….

ಈ ರೀತಿಯ ಒಂದು ಕಮೀಷನ್ ದಂಧೆಯೂ ನಡೆಯುತ್ತಿದೆ………

ಒಮ್ಮೆ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನ ಜೊತೆ ಮಾತನಾಡುತ್ತಿದ್ದೆ‌. ಆ ಸಮಯದಲ್ಲಿ ಆತನಿಗೆ ಒಂದು ಮೊಬೈಲ್ ಕರೆ ಬಂದಿತು. ಆಗ ಆತ
” ನನಗೆ ಅರ್ಜೆಂಟ್ ಕೆಲಸ ಬಂದಿದೆ. ಬೇಗ ಹೋಗಬೇಕು ” ಎಂದ.

ನಾನು ಕುತೂಹಲಕ್ಕಾಗಿ,
” ಅದೇನು ಇದ್ದಕ್ಕಿದ್ದಂತೆ ಅಷ್ಟೊಂದು ಇಂಪಾರ್ಟೆಂಟ್ ಕೆಲಸ ನಿನಗೆ ” ಎಂದು ಕೇಳಿದೆ.

ಅದಕ್ಕೆ ಆತ,” ತುಮಕೂರು ರಸ್ತೆಯಲ್ಲಿ ಒಂದು ಅಪಘಾತವಾಗಿದೆ. ಆಂಬುಲೆನ್ಸ್ ಡ್ರೈವರ್ ಕಾಲ್ ಮಾಡಿದ್ದ. ನಾನು ಹೋಗಬೇಕು ”

ನಾನು ಬಹುಶಃ ಅವನ ಹತ್ತಿರದವರು ಅಥವಾ ಪರಿಚಯದವರಿಗೆ ಅಪಘಾತ ಆಗಿರಬೇಕೆಂದು ಭಾವಿಸಿ
” ಅಪಘಾತ ಯಾರಿಗೆ ಆಗಿರುವುದು ಮತ್ತು ಎಷ್ಟು ತೀವ್ರವಾಗಿದೆ ” ಎಂದು ವಿಚಾರಿಸಿದೆ.

ಆತ ಕೊಟ್ಟ ಉತ್ತರ ಕೇಳಿ ದಂಗಾಗಿ ಹೋದೆ. ನನಗೆ ಮೊದಲ ಬಾರಿಗೆ ಆ ರೀತಿಯ ವೃತ್ತಿ ಇರುವುದು ತಿಳಿಯಿತು.

ಆತ ಹೇಳಿದ ವಿಷಯ ಮತ್ತು ನನ್ನ ಪ್ರಶ್ನೆ ಉಪಪ್ರಶ್ನೆಗಳ ಸಾರಾಂಶ….
* ಆತನಿಗೆ ಕೆಲವು ವೈದ್ಯಕೀಯ ಆಂಬುಲೆನ್ಸ್ ಚಾಲಕರ ನಿರಂತರ ಸಂಪರ್ಕವಿದೆ. ಯಾವುದೇ ರೀತಿಯ ಅಪಘಾತ ಅಥವಾ ಅನಾರೋಗ್ಯದ ಕರೆ ಆಂಬುಲೆನ್ಸ್ ಚಾಲಕರಿಗೆ ಬಂದಾಗ ಅವರು ಆ ರೋಗಿಯ ಬಳಿಗೆ ಹೋಗುವ ಮೊದಲು ಇವನಿಗೆ ಕಾಲ್ ಮಾಡುತ್ತಾರೆ. ಈತನಿಗೆ ಸುತ್ತಮುತ್ತಲ ಕೆಲವು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಗಳ ಕಾಂಟ್ಯಾಕ್ಟ್ ಇದೆ. ಈತ ಆ ಚಾಲಕರಿಗೆ ಯಾವ ಆಸ್ಪತ್ರೆಗೆ ರೋಗಿಯನ್ನು ಕರೆತರಬೇಕು ಎಂದು ಸೂಚಿಸುತ್ತಾನೆ. ( ರೋಗಿ ಅಥವಾ ಆತನ ಕಡೆಯವರು ಮೊದಲೇ ಇಂತಹ ಆಸ್ಪತ್ರೆಗೆ ಎಂದು ನಿರ್ಧರಿಸಿದ್ದರೆ ಆಗ ಇದು ಸಾಧ್ಯವಿಲ್ಲ. ) ಚಾಲಕ ಆ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಿದರೆ ಸಾಕು. ಆ ಆಸ್ಪತ್ರೆಯವರು ಈ ಏಜೆಂಟ್ ಗೆ ಒಂದಷ್ಟು ಕಮೀಷನ್ ಕೊಡುತ್ತಾರೆ. ಅದರಲ್ಲಿ ಸ್ವಲ್ಪ ಭಾಗವನ್ನು ಈತ ಆಂಬುಲೆನ್ಸ್ ಚಾಲಕರಿಗೆ ಕೊಡುತ್ತಾನೆ. ಪ್ರತಿನಿತ್ಯ ಐದಾರು ಈ ರೀತಿಯ ಕೇಸುಗಳು ಸಿಗುತ್ತವೆ. ಮುಖ್ಯವಾಗಿ ಅಪಘಾತಗಳ ಸಂದರ್ಭದಲ್ಲಿ ಈತನ ಕಮೀಷನ್ ವ್ಯಾಪಾರ ಜೋರಾಗಿರುತ್ತದಂತೆ *

ಅಪಘಾತದ ತೀವ್ರತೆ ಆಧರಿಸಿ ಅಥವಾ ಆ ಕ್ಷಣದ ವೈದ್ಯಕೀಯ ಅವಶ್ಯಕತೆಯ ಚಿಕಿತ್ಸೆಗಿಂತ ಈತ ಹೆಚ್ಚು ಕಮೀಷನ್ ಕೊಡುವ ಆಸ್ಪತ್ರೆಗೆ ರೋಗಿಯನ್ನು ಸೇರಿಸುತ್ತಾನೆ. ಆ ಆಸ್ಪತ್ರೆಯ ಸುಲಿಗೆ ಈತನ ಕಮೀಷನ್ ಹಣದಿಂದ ಪ್ರಾರಂಭವಾಗುತ್ತದೆ. ಅವಶ್ಯಕತೆ ಇರಲಿ ಬಿಡಲಿ ಅವರು ಕಡ್ಡಾಯವಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ಮತ್ತು ದೊಡ್ಡ ಮೊತ್ತದ ಹಣ ಕೀಳುತ್ತಾರೆ.

ಎಲ್ಲಿಗೆ ಬಂದಿದೆ ನೋಡಿ ನಮ್ಮ ವ್ಯವಸ್ಥೆ. ಈ ರೀತಿಯ ಕೆಲವರು ಇದೇ ವೃತ್ತಿ ಮಾಡುತ್ತಿದ್ದಾರೆ ಎಂದು ಅನಂತರ ತಿಳಿಯಿತು. ನಮ್ಮ ‌ದೇಶದಲ್ಲಿ ಬದುಕಲು ಅನೇಕ ವೃತ್ತಿಗಳಿವೆ ನಿಜ. ಸಾವಿನ, ನೋವಿನ, ಅಸಹಾಯಕತೆಯ, ಅನಿವಾರ್ಯತೆಯ ಮತ್ತು ಅಜ್ಞಾನದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಹಣ ಮಾಡುವುದನ್ನು ಒಂದು ವೃತ್ತಿಯಾಗಿ ಸ್ವೀಕರಿಸುವುದು ಅತ್ಯಂತ ಅಮಾನವೀಯ ಎಂದೇ ಹೇಳಬೇಕಾಗುತ್ತದೆ. ಭವಿಷ್ಯದಲ್ಲಿ ಇದು ಸಮಾಜಕ್ಕೆ ಮಾರಕವಾಗುತ್ತದೆ.

ಇನ್ನು ವೈದ್ಯಕೀಯ ಕ್ಷೇತ್ರವೂ ಸಹ ಲಾಡ್ಜ್ ಗಳು, ಹೋಟೆಲ್ ಗಳು, ಶಾಲೆಗಳ ರೀತಿ ಗಿರಾಕಿಗಳನ್ನು ಕರೆ ತಂದವರಿಗೆ ಕಮೀಷನ್ ನೀಡುವ, ಆ ಮುಖಾಂತರ ತಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಪಡಿಸಿಕೊಳ್ಳುವ ವಿಧಾನ ತುಂಬಾ ಹೇಯವಾದದ್ದು. ಇದು ಜನರ ವಿಶ್ವಾಸವನ್ನು ಬಹುಬೇಗ ಕಳೆದುಕೊಳ್ಳುತ್ತದೆ.

ಆಸ್ಪತ್ರೆಗಳ ಸುಲಿಗೆ ಕೊರೋನಾ ಸಂದರ್ಭದಲ್ಲಿ ಮಾತ್ರ ಪ್ರಾರಂಭವಾಗಿಲ್ಲ. ಅದು ಹಿಂದಿನಿಂದಲೂ ಇದೆ. ಕಾರ್ಪೊರೇಟ್ ಸಂಸ್ಥೆಗಳು ಜನರ ಅನಾರೋಗ್ಯ ಅಪಘಾತಗಳನ್ನು ಹಣ ಮಾಡುವ ದಂಧೆಯಾಗಿ ಮಾಡಿಕೊಂಡು ರೋಗಿಗಳೇ ಗ್ರಾಹಕರಾಗುವ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ.

ಜೊತೆಗೆ ಸರ್ಕಾರಗಳು ಸಹ ವೈದ್ಯಕೀಯ ಶಿಕ್ಷಣವನ್ನು ಅತ್ಯಂತ ದುಬಾರಿ ವೆಚ್ಚದ ಪದವಿಯನ್ನಾಗಿ ಮಾಡಿ ಆಸ್ಪತ್ರೆಗಳಿಗೂ ಕಮರ್ಷಿಯಲ್ ಟ್ಯಾಕ್ಸ್, ವಿದ್ಯುತ್, ನೀರು, ಬಾಡಿಗೆ ಎಲ್ಲವನ್ನೂ ವಿಧಿಸಿರುವಾಗ ಅವರೂ ಸಹ ಅದಕ್ಕೆ ತಕ್ಕಂತೆ ಹಣವನ್ನೇ ಗುರಿ ಮಾಡಿಕೊಂಡು ರೋಗವೇ ಒಂದು ವ್ಯಾಪಾರ ಆಗಿ ಬದಲಾಗಿದೆ.

ಒಂದು ಸಣ್ಣ ಅಂಶವನ್ನು ಜನರು ಮತ್ತು ಸರ್ಕಾರ ಗುರುತಿಸದೇ ಮರೆತಂತಿದೆ. ಆಸ್ಪತ್ರೆಗಳು ಸರಳವಾಗಿ, ಸ್ವಚ್ಚವಾಗಿ, ಉತ್ತಮ ವೈದ್ಯಕೀಯ ಯಂತ್ರಗಳು ಮತ್ತು ಸಿಬ್ಬಂದಿಯನ್ನು ಹೊಂದಿದ್ದರೆ ಸಾಕು. ಆದರೆ ಅದು ಏನು ಹುಚ್ಚು ಹಿಡಿದಿದೆಯೋ ಅರ್ಥವಾಗುತ್ತಿಲ್ಲ. ಆಸ್ಪತ್ರೆಯ ಕಟ್ಟಡಗಳನ್ನೇ ಫೈವ್ ಸ್ಟಾರ್ ಹೋಟೆಲಿನಂತೆ ಭವ್ಯವಾಗಿ ನಿರ್ಮಿಸಿ, ಅತ್ಯಂತ ದುಬಾರಿ ವೆಚ್ಚದ ನಿರ್ಮಾಣ ಸಾಮಗ್ರಿಗಳನ್ನು ಉಪಯೋಗಿಸಿ, ಅನವಶ್ಯಕ ಸಿಬ್ಬಂದಿಯನ್ನು ನೇಮಿಸಿಕೊಂಡು ಆ ಎಲ್ಲಾ ವೆಚ್ಚವನ್ನು ರೋಗಿಗಳ ಮೇಲೆ ಹೇರಲಾಗುತ್ತದೆ. ಆಸ್ಪತ್ರೆಗಳ ಪ್ರಾರಂಭಿಕ ಚಿಕಿತ್ಸೆಯೇ ಸಾವಿರಾರು ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

ಆಸ್ಪತ್ರೆಗಳಿಗೆ ಮನುಷ್ಯ ಮಜಾ ಮಾಡಲು ಹೋಗುತ್ತಾನೆಯೇ ? ಆ ರೀತಿಯ ಭವ್ಯ ಕಟ್ಟಡದ ಅವಶ್ಯಕತೆ ಏನಿದೆ ? ಸೌಕರ್ಯ ಮತ್ತು ‌ಸೇವೆ ಮಾತ್ರ ಮುಖ್ಯವಾಗಬೇಕಲ್ಲವೇ ?
ಅದರಿಂದಾಗಿಯೇ ಇಂದು ನಾವು ಆಸ್ಪತ್ರೆಗಳ ರಾಕ್ಷಸೀ ವರ್ತನೆಯನ್ನು ನೋಡುತ್ತಿದ್ದೇವೆ.

ಇನ್ನು ಜೀವ ವಿಮೆ ( Insurance )
ಎಂಬ ಬೃಹತ್ ಮಾಯಾಜಾಲವೂ ಜೀವ ರಕ್ಷಣೆಯನ್ನೂ ಆರ್ಥಿಕ ಸುರಕ್ಷತೆಯನ್ನೂ ಮೀರಿ ಹೊಸ ದಂಧೆಯಾಗಿ ಮಾರ್ಪಾಡಾಗಿದೆ. ಅದನ್ನು ಮುಂದೊಮ್ಮೆ ಚರ್ಚಿಸೋಣ.

ಬದುಕು ಅನಿವಾರ್ಯ ನಿಜ. ಆದರೆ ಬದುಕಲು ಇಷ್ಟೊಂದು ಕೆಳ ಹಂತಕ್ಕೆ ನಾವು ಇಳಿಯಬೇಕೆ ? ನಾಗರಿಕ ಸಮಾಜ ಚಲಿಸುತ್ತಿರುವುದು,
ಮುಂದಕ್ಕೋ – ಹಿಂದಕ್ಕೋ…..

ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಕ್ಕೆ ಸಾಗುವ ಮಾರ್ಗಗಳನ್ನು ಹುಡುಕೋಣ. ವೈದ್ಯಕೀಯ ನಮ್ಮ ಬದುಕಿನ ಅವಿಭಾಜ್ಯ ಅಂಗ. ವೈದ್ಯರು ನಮ್ಮ ಜೀವರಕ್ಷಕರು. ಕೊರೋನಾ ನಂತರದ ವಾತಾವರಣ ವೈದ್ಯಕೀಯ ಕ್ಷೇತ್ರದ ಹೊಸ ಪರಿಕಲ್ಪನೆಗೆ ನಾಂದಿಯಾಗಲಿ ಎಂದು ಆಶಿಸುತ್ತಾ……

ವೈದ್ಯರ ದಿನದ ಶುಭಾಶಯಗಳು ( ಜುಲೈ 1 )……..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!