ಚಿನ್ನದ ಗಿರವಿ ಅಂಗಡಿಯ ಹಿಂಭಾಗದ ಗೋಡೆಯಲ್ಲಿದ್ದ ಕಿಟಕಿಯ ಕಬ್ಬಿಣದ ಸರಳುಗಳನ್ನು ಗ್ಯಾಸ್ ಕಟ್ಟರ್ನಿಂದ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಚಿನ್ನದ ಅಂಗಡಿಯೊಳಗಿದ್ದ 10ಕೆ.ಜಿ ಬೆಳ್ಳಿ ಸಾಮಗ್ರಿಗಳು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬಳಿ ಇರುವ ಹೊಸಹೊಳಲು ರಸ್ತೆ ಬಿ.ವರದರಾಜೇಗೌಡ ಕಾಂಪ್ಲೆಕ್ಸ್ನಲ್ಲಿ ಇರುವ ಶ್ರೀ ಲೀಲಾ ಜ್ಯುವೆರ್ಸ್ ಮತ್ತು ಬ್ಯಾಂಕರ್ಸ್ ಚಿನ್ನದ ಅಂಗಡಿಯಲ್ಲಿ ಬುಧವಾರ ರಾತ್ರಿ ಅಮಾವಾಸ್ಯೆ ದಿನ ಮಧ್ಯರಾತ್ರಿ ನಡೆದಿದೆ.
ಶ್ರೀ ಲೀಲಾ ಬ್ಯಾಂಕರ್ಸ್ ಮಾಲೀಕ ರಮೇಶ್ ಅವರು ಮಂಗಳವಾರ ರಾತ್ರಿ 8ಗಂಟೆಯವರೆಗೆ ಎಂದಿನಂತೆ ಕೆಲಸ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಬುಧವಾರ ಅಮಾವಾಸ್ಯೆಯ ಅಂಗವಾಗಿ ಅಂಗಡಿಯನ್ನು ತೆರೆದಿರಲಿಲ್ಲ. ಆದರೆ ರಾತ್ರಿ ಅಂಗಡಿಯ ಹಿಂಭಾಗದಿಂದ ದಲಿತರ ಶಿಕ್ಷಣ ಸಂಸ್ಥೆಯ ಕಾಂಪೌಂಡ್ ಹಾರಿ ಬಂದು ಗ್ಯಾಸ್ ಕಟ್ಟರ್ನಿಂದ ಅಂಗಡಿಯ ಹಿಂಭಾಗದ ಕಿಟಕಿಯನ್ನು ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಸುಮಾರು ಏಳ ಲಕ್ಷ ರೂ ಮೌಲ್ಯದ 10ಕೆ.ಜಿ.ಬೆಳ್ಳಿಯ ಆಭರಣಗಳು, ಲಕ್ಷಾಂತರ ರೂ ಮೌಲ್ಯದ ಚಿನ್ನದ ಆಭರಣಗಳು ಹಾಗೂ ಅಂಗಡಿಯ ಗಲ್ಲದಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಜೊತೆಗೆ ಅಂಗಡಿಯಲ್ಲಿ ಹಾಕಲಾಗಿದ್ದ ಸಿ.ಸಿ. ಟೀವಿಯ ಪುಟೇಜ್ ಸ್ಟೋರೇಜ್ ರಿಸೀವರ್ ಸಹ ಕದ್ದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎ.ಎಸ್.ಪಿ ತಿಮ್ಮಯ್ಯ, ಡಿ.ವೈ.ಎಸ್.ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್, ವೃತ್ತ ನಿರೀಕ್ಷಕ ದೀಪಕ್, ಪಿ.ಎಸ್.ಐ ಸುನಿಲ್, ಗ್ರಾಮಾಂತರ ಇನ್ಸ್ಪೆಕ್ಟರ್ ಜಗದೀಶ್ ಮತ್ತಿತರ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಕುರಿತು ಅಂಗಡಿ ಮಾಲೀಕ ರಮೇಶ್ ನೀಡಿದ ದೂರಿನ ಮೇರೆಗೆ ಕೆ.ಆರ್.ಪೇಟೆ ಟೌನ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.