ದಲಿತ ಸಮುದಾಯಕ್ಕೆ ಸೇರಿದ್ದೇನೆಂಬ ಕಾರಣಕ್ಕೆ ನಾಗ್ಪುರದಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿಯ ಹೆಡಗೇವಾರ್ ವಸ್ತುಸಂಗ್ರಹಾಲಯಕ್ಕೆ ಪ್ರವೇಶ ನೀಡಲಿಲ್ಲ ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿರುವ ನಾಗ್ಪರಕ್ಕೆ ತೆರಳಿದ್ದಾಗ ತಮಗಾದ ಕಹಿ ಅನುಭವದ ಬಗ್ಗೆ ಅವರು ಆಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ದಲಿತರೆಂಬ ಕಾರಣಕ್ಕೆ ಆರ್ಎಸ್ಎಸ್ ಕಚೇರಿಗೆ ಪ್ರವೇಶ ನೀಡಲಿಲ್ಲ. ಇದಕ್ಕೆ ಕಾರಣ ಏನೆಂದು ಸ್ಪಷ್ಟಪಡಿಸುತ್ತೀರಾ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಪ್ರಶ್ನಿಸಿದ್ದಾರೆ.
“ರಾಜ್ಯದಲ್ಲಿ ವಿಧಾನಸಭಾ ಚುಣಾವಣೆ ಘೋಷಣೆಗೂ ಮೂರು ತಿಂಗಳು ಮುಂಚೆ ಆರ್ಎಸ್ಎಸ್ ಕಚೇರಿಗೆ ಹೋಗಿದ್ದೆ. ಆದರೆ, ಅಲ್ಲಿನ ಹೆಡಗೇವಾರ್ ವಸ್ತುಸಂಗ್ರಹಾಲಯಕ್ಕೆ ನನಗೆ ಪ್ರವೇಶ ನೀಡಲಿಲ್ಲ” ಎಂದು ಆರೋಪಿಸಿದ್ದಾರೆ.
“ನಾನು ಪರಿಶಿಷ್ಟ ಜಾತಿಗೆ ಸೇರಿದ್ದರೂ, ಹಿಂದು ಎಂಬ ಬಗ್ಗೆ ಹೆಮ್ಮೆ ಇದೆ. ಆದರೆ, ಆರ್ಎಸ್ಎಸ್ ಕಚೇರಿಯಲ್ಲಿ ವಸ್ತುಸಂಗ್ರಹಾಲಯಕ್ಕೆ ಬರುವವರ ಮಾಹಿತಿ ಸಂಗ್ರಹಿಸಲಾಗುತ್ತದೆ. ನಾನು ನನ್ನ ಮಾಹಿತಿ ನೋಂದಾಯಿಸಿ ಒಳಗೆ ಹೋಗುವಾಗ ದ್ವಾರದಲ್ಲಿಯೇ ನನ್ನನ್ನು ಒಬ್ಬರು ತಡೆದರು. ಪರಿಶಿಷ್ಟರಿಗೆ ಪ್ರವೇಶವಿಲ್ಲವೆಂದು ತಿಳಿಸಿದರು. ನನ್ನೊಂದಿಗಿದ್ದ ಇಬ್ಬರು ಒಳಗೆ ಹೋದರು. ನಾನು ಹೊರಗೆ ಕಾಯುತ್ತಿದ್ದೆ” ಎಂದು ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.