ಕಬ್ಬಿಗೆ ನ್ಯಾಯಯುತ ಬೆಲೆ ನಿಗಧಿಗೊಳಿಸಬೇಕು, ಹಾಲಿನ ದರ ಹೆಚ್ಚಳ ಮಾಡಬೇಕು, ರಾಜ್ಯಾದ್ಯಂತ ಏಕರೂಪದ ಭತ್ತದ ಬೆಲೆ ನಿಗದಿಗೊಳಿಸಿ, ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಡ್ಯದಲ್ಲಿ ರೈತರು ಕಳೆದ ನಲವತ್ತ ಮೂರು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸಕಾರಾತ್ಮಕ ವಾಗಿ ಸ್ಪಂದಿಸದ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಕರೆಯಲಾಗಿದ್ದ ಮದ್ದೂರು ಬಂದ್ ಯಶಸ್ವಿಯಾಯಿತು.
ಕರ್ನಾಟಕ ರಾಜ್ಯ ರೈತಸಂಘ ಡಿ.19 ರಂದು ಕರೆ ನೀಡಿದ್ದ ಮಂಡ್ಯ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ, ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಮದ್ದೂರು ಬಂದ್ ಗೆ ಕರೆ ನೀಡಿತ್ತು. ಇಂದು ಬೆಳಗಿನ ಜಾವ ಎಂಟೂವರೆ ಗಂಟೆಗೆ ಪ್ರವಾಸಿ ಮಂದಿರದ ಬಳಿ ಸೇರಿದ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ರೈತರು ಬೈಕ್ ಜಾಥಾ ಆರಂಭಿಸಿ, ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸುತ್ತಾ ಸತ್ಯಾಗ್ರಹ ಸೌಧದವರೆಗೆ ಬೈಕ್ ಜಾಥಾ ನಡೆಸಿದರುಮಧ್ಯಾಹ್ನ ತಹಶಿಲ್ದಾರ್ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು, ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಸಲ್ಲಿಸಿತು.
ಈ ವೇಳೆ ಮಾತನಾಡಿದ ಗೊರವನಹಳ್ಳಿ ಪ್ರಸನ್ನ, ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ರೈತಪರ ನಿಲುವು ಕೈಗೊಂಡು ಟನ್ ಕಬ್ಬಿಗೆ 4.500 ರೂ. ನಿಗದಿಗೊಳಿಸಬೇಕು. ಲೀಟರ್ ಹಾಲಿಗೆ 40 ರೂ. ನಿಗದಿಗೊಳಿಸಬೇಕು ಮತ್ತು ಕರಾವಳಿ, ಬಯಲು ಸೀಮೆ ತಾರತಮ್ಯ ಇಲ್ಲದೆ ರಾಜ್ಯಾದ್ಯಂತ ಏಕರೂಪದ ಬೆಂಬಲ ಬೆಲೆ ನಿಗದಿಗೊಳಿಸಿ, ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು.
ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್ ಮಾತನಾಡಿ, ಪ್ರತಿಭಟನೆ ನಿರತ ರೈತರಿಗೆ ಸದ್ಯದಲ್ಲೇ ಸಿಹಿಸುದ್ದಿ ಕೊಡುವುದಾಗಿ ಹೇಳುತ್ತಲೇ ಸರ್ಕಾರ ರೈತ ವೀರೊಧಿ ಧೋರಣೆ ತೋರುತ್ತಿರುವುದು ಖಂಡನೀಯ ಎಂದರು.
ಹಾಲು ಉತ್ಪಾದಕರ ಹೋರಾಟ ಸಮಿತಿಯ ಅಧ್ಯಕ್ಷ ಜಿ.ಕೆ.ರಾಜು ಮಾತನಾಡಿ, ಹಾಲಿನ ಬೆಲೆ ಹೆಚ್ಚಳದ ನಾಟಕ ಮಾಡಿ ಪಶು ಆಹಾರ ಬೆಳೆ ತುಟ್ಟಿಗೊಳಿಸಿದ ಸರ್ಕಾರದ ಕ್ರಮ ಖಂಡನೀಯ ಎಂದರು.
ಪ್ರಗತಿಪರ ಸಂಘಟನೆಯ ಮಾರ್ಗದರ್ಶಕ ನ.ಲಿ.ಕೃಷ್ಣ ಮಾತನಾಡಿ, ಕರ ನಿರಾಕರಣೆ ವೇಳೆ ಬಾಕಿ ಉಳಿಸಿಕೊಂಡಂತಹ ರೈತರ ಬಾಕಿ ಬಿಲ್ ಶೂನ್ಯಗೊಳಿಸುವ ಭರವಸೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಆಶೋಕ್, ಶ್ರಿಕಾ ಶ್ರೀನಿವಾಸ್, ಅಜ್ಜಹಳ್ಳಿ ಬಸವರಾಜ್, ಹುಲಿಗೆರೆ ಪುರ ರವಿಗೌಡ, ರಾಖೇಶ್ ಕುದರಗುಂಡಿ, ಅವಿನಾಶ್ ಶಂಕರಪುರ, ಅರ್ಜುನ್ ಚಾಮನಹಳ್ಳಿ, ಸುನಿಲ್ ವಳಗೆರೆಹಳ್ಳಿ ,ಮದ್ದೂರು ಜಗದೀಶ್, ಮಾಥ್ಯೂ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಯುವ ಅಧ್ಯಕ್ಷ ಮನು ತಿಪ್ಪೂರು, ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜ್, ಸವಿತಾ ಸಮಾಜದ ಶಶಿಕುಮಾರ್ ಹಾಜರಿದ್ದರು.
ಜಾಮಿಯಾ ಷಾದಿ ಕಮಿಟಿ ಯ ಆದಿಲ್ ಆಲಿಖಾನ್, ಚಾಮನಹಳ್ಳಿ ರಾಮಣ್ಣ, ಹಾಗಲಹಳ್ಳಿ ರಮೇಶ್, ಮದ್ದೂರು ಜಗದೀಶ್, ವರ್ತಕರ ಸಂಘದ ವೀರಭದ್ರಸ್ವಾಮಿ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಸುರೇಶ್ ಚುಂಚಗಹಳ್ಳಿ ಮಹೇಶ್ ಗೊರವನಹಳ್ಳಿ ದಲಿತ ಸಂಘಟನೆಯ ಕೆ ಟಿ ಶಿವಕುಮಾರ್, ರೈತಸಂಘದ ಸೊ ಶಿ ಪ್ರಕಾಶ್, ನಗರಕೆರೆ ಪುರುಷೋತ್ತಮ, ದೇವರಾಜ್ ಶಾನುಭೊಗ್, ನಗರಕೆರೆ ಜಯರಾಮು, ಎನ್ ಎ ಧನಂಜಯ್ಯ, ಯಡವನಹಳ್ಳಿ ಕೃಷ್ಣೇಗೌಡ ಉಪಸ್ಥಿತರಿದ್ದರು.