ಜಿಲ್ಲೆಯ ಹಲವು ತಾಲೂಕುಗಳಲ್ಲಿ ಚಿರತೆಗಳ ಹಾವಳಿಯಿಂದ ಜನರು ಭಯ, ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಕೆ.ಆರ್.ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ದಿನ ಬೃಂದಾವನ ಬಂದ್ ಮಾಡಲಾಗಿತ್ತು. ಅಲ್ಲಿ ಕಾಣಿಸಿಕೊಂಡ ಚಿರತೆ ಇದುವರೆಗೂ ಬೋನಿಗೆ ಬಿದ್ದಿಲ್ಲ.
ಹಾಗೆಯೇ ನವೆಂಬರ್ 25 ರಂದು ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಎರಡು ಚಿರತೆಗಳು ಬೋನಿಗೆ ಬಿದ್ದಿದ್ದವು. ಹಾಗೆಯೇ ಡಿಸೆಂಬರ್ 19 ರಂದು ಮಂಡ್ಯ ತಾಲೂಕಿನ ಲೋಕಸರ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ.
ಇನ್ನು ಹಲವು ತಾಲ್ಲೂಕುಗಳಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಜನರು ದೂರಿದ್ದಾರೆ. ಬೆಟ್ಟ ಗುಡ್ಡಗಳು,ಅರಣ್ಯ ಪ್ರದೇಶಗಳು ಇಲ್ಲದ ಗ್ರಾಮಗಳಲ್ಲೂ ಕೂಡ ಚಿರತೆ ಕಾಣಿಸಿಕೊಂಡಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಒಂಟಿಯಾಗಿ ಹೊಲಗದ್ದೆಗಳ ಕಡೆ ಹೋಗಲು ಜನರು ಭಯ ಪಡುತ್ತಿದ್ದಾರೆ. ಹಗಲಿನಲ್ಲೇ ಓಡಾಡಲು ಆತಂಕ ಪಡುತ್ತಿರುವ ಜನರು ರಾತ್ರಿ ಮನೆಯಿಂದ ಹೊರಗೆ ಹೋಗದೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಹಲವು ತಾಲೂಕುಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಜನತೆ ಭಯ ಆತಂಕದಿಂದ ದಿನ ದೂಡುವಂತಾಗಿದೆ.