ಸರ್ಕಾರಿ ಶಾಲೆಗಳು ಆಧುನೀಕರಣ ಅಳವಡಿಸಿಕೊಂಡು ಸುಧಾರಣೆ ಆಗಬೇಕಿದೆ ಎಂದು ಬಿಜೆಪಿ ಯುವ ನಾಯಕ ಅಶೋಕ್ ಜಯರಾಂ ತಿಳಿಸಿದರು.
ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಎ.ಇ.ಟಿ, ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಐಎಎಸ್ ಅಶೋಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷ ಅಶೋಕ್ ಜಯರಾಂ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಇಂದು ದೊಡ್ಡ ಮಟ್ಟದ ಅಂತರ ನಿರ್ಮಾಣವಾಗಿದೆ. ಸರ್ಕಾರಿ ಶಿಕ್ಷಣ ಕೇತ್ರ ತುಂಬಾ ಸುಧಾರಣೆ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಆದರೆ, ಆ ಸುಧಾರಣೆ ನಮ್ಮ ಮಕ್ಕಳ ಮೂಲಕ ಆಗಬಾರದು ಎಂಬುದು ನಮ್ಮ ಮನಸ್ಥಿತಿಯಾಗಿದ್ದು, ಇದು ನಮ್ಮಲ್ಲಿ ಆತಂಕವನ್ನು ಸೃಷ್ಠಿ ಮಾಡಿದೆ ಎಂದರು.
ಎಲ್ಲಾ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಎಲ್ಲರೂ ಪ್ರಶ್ನೆ ಮಾಡುತ್ತೇವೆ. ಆದರೂ ಸಹ ಹಲವಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಹೊರತು ಪಡಿಸಿ ಉತ್ತಮ ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ. ಶಿಕ್ಷಣ ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಎಸ್.ಶ್ರುತಿ, ಡಾ.ಕೆ.ಜಿ.ಭವಾನಿಶಂಕರ್, ಡಾ.ಮಾದೇಶ್, ಶಾರದ, ರಮೇಶ, ರಾಜು, ಬಿ.ಟಿ.ಚಂದ್ರಕಾಂತ್ ಹಾಜರಿದ್ದರು.