ರಾಜ್ಯ ಸರ್ಕಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11 ಸಾವಿರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಡಾ.ಸರ್ಜಾಶಂಕರ ಹರಳಿಮಠ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಯಶಸ್ವಿ ಹಾಗೂ ಅನುಷ್ಠಾನಕ್ಕಾಗಿ ಅತಿಥಿ ಉಪನ್ಯಾಸಕರಿಗೆ ತ್ವರಿತ ಸೇವಾ ಸಕ್ರಮಾತಿ, ಸೇವಾ ಭದ್ರತೆ ಹಾಗೂ ಸೇವಾ ವೀಲಿನಾತಿ ಒದಗಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಸಾರ, ಪ್ರತಿ 50-60 ವಿದ್ಯಾರ್ಥಿಗಳಿಗೆ ತರಗತಿಗಳನ್ನು ವಿಭಾಗಿಸುವ ಮೂಲಕ ಗುಣಮಟ್ಟದ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
2009 ಜುಲೈ 11ರ ಒಳಗಿನ ಎಂಫಿಲ್ ಪದವಿಯನ್ನು NET, K-SET ಪರೀಕ್ಷೆಗಳಿಗೆ ಸರಿಸಮಾನವಾದುದೆಂದು ಪರಿಗಣಿಸುವುದು, ಸಾಂಪ್ರದಾಯಕ ವಿಷಯಗಳಲ್ಲಿ (ಸಮಾಜಶಾಸ್ತ್ರ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಅಪರಾಧಶಾಸ್ತ್ರ. ಇತ್ಯಾದಿ ) ಕನಿಷ್ಠ 05 (ಐದು) ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ಮಿತಿಗೊಳಿಸುವ ಮೂಲಕ ಸಾಂಪ್ರದಾಯಿಕ ವಿಷಯಗಳ ಉಳಿಸುವಿಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” ಯನ್ನು ಬಡ ಅತಿಥಿ ಉಪನ್ಯಾಸಕರಿಗೂ ವಿಸ್ತರಿಸುವ ಮೂಲಕ ಅವರ ಕೌಟುಂಬಿಕ ಆರೋಗ್ಯ ರಕ್ಷಣೆಗೆ ಕ್ರಮವಹಿಸುವುದು. ಕರ್ತವ್ಯನಿರತ ಅತಿಥಿ ಉಪನ್ಯಾಸಕರು ವಿವಿಧ ಕಾರಣಗಳಿಂದ ಮರಣ ಹೊಂದಿದರೆ ಹಾಗೂ ಅಪಘಾತದಲ್ಲಿ ತೀವ್ರ ಸ್ವರೂಪದ ಶಾಶ್ವತ ದೈಹಿಕ ಹಾನಿಯುಂಟಾಗಿದ್ದರೆ ಕನಿಷ್ಠ 50 ಲಕ್ಷ ರೂ.ಗಳ ಪರಿಹಾರ ಧನವನ್ನು ನೀಡುವ ಮೂಲಕ ಅವರ ಬಡ ಕುಟುಂಬಗಳಿಗೆ ನೆರವಾಬೇಕೆಂದು ಒತ್ತಾಯಿಸಿದರು.
ವರ್ಷದ 12(ಹನ್ನೆರಡು) ತಿಂಗಳುಗಳ ಕಾಲ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಲು ಕ್ರಮ ಕೈಗೊಳ್ಳಬೇಕು, ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವಧನದಲ್ಲಿ ಪ್ರತೀ ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಉಪಾಧ್ಯಕ್ಷೆ ದೀಪ ಸಿಂಗ್, ರಾಜ್ಯ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಾ.ಇಂದ್ರಕುಮಾರ್, ಡಾ.ಕಿರಣ್, ಡಾ.ಸ್ವಾಮಿ ಉಪಸ್ಥಿತರಿದ್ದರು.