ನಮ್ಮ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ದೇವರ ಆರ್ಶೀವಾದವಿದ್ದು,ಅವರು ಆರೋಗ್ಯವಾಗಿದ್ದಾರೆ.ಅವರ ಆರೋಗ್ಯದ ಬಗ್ಗೆ ಜನತೆ ಆತಂಕ ಪಡಬೇಕಾಗಿಲ್ಲ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ನಮ್ನ ವರಿಷ್ಠರಾದ ದೇವೇಗೌಡರು ಆರೋಗ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಿ ರಾತ್ರಿಯೇ ಮನೆಗೆ ವಾಪಾಸ್ಸಾಗಿದ್ದಾರೆ. ಅವರು ಆರೋಗ್ಯವಾಗಿದ್ದು,ಯಾವುದೇ ಆತಂಕ ಪಡಬೇಕಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಮೇಲುಕೋಟೆ ಕ್ಷೇತ್ರದಲ್ಲಿ ಹೇಗಿದೆ ಎಂದು ಅವರ ಪಕ್ಷದ ನಾಯಕರೇ ಬಹಿರಂಗಪಡಿಸಿದ್ದಾರೆ.ಕಾಂಗ್ರೆಸ್ ನಾಯಕರಿಗೆ ಈಗ ಜ್ಞಾನೋದಯವಾಗಿದೆ.ಬಿಜೆಪಿ ದುರಾಡಳಿತದ ವಿರುದ್ಧ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಬೇಕಾದ ಕಾಂಗ್ರೆಸ್ ನಾಯಕರು ಮೇಲುಕೋಟೆಯಲ್ಲೂ ಕಾಂಗ್ರೆಸ್ ಪಕ್ಷ ಸದೃಢಗೊಳಿಸಲಿ ಎಂದರು.
ಮೇಲುಕೋಟೆಯಲ್ಲಿ ರೈತಸಂಘ ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡು ನನ್ನನ್ನು ಸೋಲಿಸಲು ಚಕ್ರವ್ಯೂಹ ರಚಿಸಿಕೊಂಡರೂ ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನನ್ನು 25 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ.
ನಾನಗಲೇ ಅವರ ಚಕ್ರವ್ಯೂಹ ಬೇಧಿಸಿ ಹಲವು ದಿನಗಳೇ ಆಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಮೈತ್ರಿ ಮಾಡಿಕೊಂಡರೂ, ಚಕ್ರವ್ಯೂಹ ರಚಿಸಿದರೂ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿದೆ. ಕ್ಷೇತ್ರದ ಜನರ ಆರ್ಶೀವಾದದೊಂದಿಗೆ ‘ಬಾಹುಬಲಿ’ರೀತಿ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.