ಕೆ.ಆರ್.ಎಸ್ ನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ನೇಣಿನ ಕುಣಿಕೆಗಳನ್ನು ಹಿಡಿದು ರೈತರು ಪ್ರತಿಭಟನೆ ನಡೆಸಿದರು.
ರೈತ ಸಂಘ ಮತ್ತು ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಮೆರವಣಿಗೆ ಹೊರಟ ರೈತರು ,ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ತಾಲೂಕು ಕಚೇರಿವರೆಗೂ ತೆರಳಿ ಧರಣಿ ನಡೆಸಿದರು.
ಕಾವೇರಿ ನದಿ ಪಾತ್ರದ ರೈತರಿಗೆ ದ್ರೋಹ ಮಾಡಿರುವ ರಾಜ್ಯ ಸರ್ಕಾರ ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿ ಜಲಾಶಯವನ್ನ ಖಾಲಿ ಮಾಡುತ್ತಿದೆ. ಇಲ್ಲಿನ ರೈತರು ನಾಟಿ ಮಾಡಲು ನೀರು ನೀಡದೇ ವಂಚಿಸುತ್ತಿದೆ ಎಂದು ಕಿಡಿಕಾರಿದರು.
ಗ್ಯಾರಂಟಿ ಭಾಗ್ಯದ ಹೆಸರಲ್ಲಿ ಅಧಿಕಾರಕ್ಕೆ ಬಂದು ನೆರೆ ರಾಜಕ್ಕೆ ನೀರು ಬಿಟ್ಟು ರೈತರಿಗೆ ನೇಣು ಭಾಗ್ಯ ನೀಡುತ್ತಿದೆ, ಕೆ ಆರ್ ಎಸ್ ಜಲಾಶಯದಿಂದ ನೀರು ನಿಲ್ಲಿಸದಿದ್ದರೆ ಜಿಲ್ಲೆಯ ರೈತರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ನಂಜುಂಡೇಗೌಡ, ಹನಿಯಂಬಾಡಿ ನಾಗರಾಜ್, ಮೇಳಾಪುರ ದೇವರಾಜ್, ಶಿವರಾಜ್ ಕೆಂಪಣ್ಣ, ಕೂಡ್ಲು ಕುಪ್ಪೆ ರವಿ, ರಾಮಣ್ಣ ಕಡತನಾಳು, ಪುರುಷೋತ್ತಮ ಚಂದಗಾಲು, ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಉಂಡವಾಡಿ ಮಹದೇವು, ಮಹದೇವಪುರ ಕೃಷ್ಣ ಮತ್ತಿತರರಿದ್ದರು.