ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಸಾರ್ವಜನಿಕರಿಂದ ಹಾಗೂ ಪಕ್ಷಾತೀತವಾಗಿ ಇತರೆ ಪಕ್ಷದ ಮುಖಂಡರಿಂದಲೂ ಸಹ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಕುಮಾರಸ್ವಾಮಿ ಅವರು ಮಂಡ್ಯದಿಂದಲೇ ಸ್ಪರ್ಧಿಸಲಿ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಒತ್ತಾಯಿಸಿದ್ದಾರೆ.
ಮಂಡ್ಯ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವುದು. ಜಿಲ್ಲೆಯ ಮುಖ್ಯ ಕೇಂದ್ರ ಮಂಡ್ಯ ದೊಡ್ಡ ಗ್ರಾಮದಂತೆ ಕಾಣುತ್ತದೆಯೇ ಹೊರೆತು ಇನ್ನೂ ನಗರವಾಗಿ ಮಾರ್ಪಾಡಾಗಿಲ್ಲ. ಮಂಡ್ಯ ಎಂದರೆ ಇಂಡಿಯಾ ಎಂಬ ಪದ ಪದಕ್ಕಷ್ಟೆ ಸೀಮಿತ. ರೈತರ ಬೆನ್ನೆಲುಬು ಮಂಡ್ಯ ಶುಗರ್ ಪ್ಯಾಕ್ಟರಿ ಕುಂಟುತ್ತ ಸಾಗುತ್ತಿದೆ. ಉದ್ಯೋಗ ನೀಡಿದ ಹೆಸರಾಂತ ಪ್ಯಾಕ್ಟರಿಗಳು ಹರಾಜಾದವು. ಉದ್ಯೋಗ ಸೃಷ್ಟಿಸುವಂತಹ ಕಾರ್ಖಾನೆಗಳು ಸ್ಥಾಪನೆಯಾಗಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಹೊರ ನಗರಗಳಿಗೆ ಜನರು ಉದ್ಯೋಗ ನಿಮಿತ್ತ ವಲಸೆ ಹೋಗುತ್ತಿದ್ದಾರೆ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಚ್.ಡಿ.ಕೆ ಸ್ಪರ್ಧಿಸಿದರೆ ಕ್ಷೇತ್ರ ತ್ಯಾಗ ಮಾಡುವುದಾಗಿ ಘೋಷಿತ ಅಭ್ಯರ್ಥಿ ಎಂ.ಶ್ರೀನಿವಾಸ್ ಸಹ ಹೇಳಿದ್ದು, ಇನ್ನುಳಿದ ಸ್ಪರ್ಧಾಕಾಂಕ್ಷಿಗಳು, ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರುಗಳು,ಪದಾಧಿಕಾರಿಗಳ ಅಭಿಪ್ರಾಯವು ಸಹ ಇದೆ ಆಗಿರುತ್ತದೆ. ಹೆಚ್.ಡಿ.ಕೆ ರವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಲು ಕಾರ್ಯಕರ್ತರು ಟೊಂಕ ಕಟ್ಟಿ ತುದಿಗಾಲಲ್ಲಿ ನಿಂತಿದ್ದಾರೆ. ಆದ್ದರಿಂದ ಮಂಡ್ಯದಿಂದಲೇ ಅವರು ಸ್ಪರ್ಧೆ ಮಾಡಬೇಕೆಂದು ಆಗ್ರಹಿಸಿದ್ದಾರೆ.