Thursday, September 19, 2024

ಪ್ರಾಯೋಗಿಕ ಆವೃತ್ತಿ

HDK-BSY ಜಂಟಿ ಹಗರಣ| ಡಿನೋಟಿಪಿಕೇಷನ್ ಗೆ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನವಿತ್ತು ಎಂದ ನಿವೃತ್ತ ಐಎಎಸ್ ಅಧಿಕಾರಿ!

ಈದಿನ.ಕಾಮ್ ತನಿಖಾ ವರದಿ ಪ್ರಕಟಿಸಿದ ಬಳಿಕ, ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರು ಜಂಟಿಯಾಗಿ ನಡೆಸಿದ ಡಿನೋಟಿಫಿಕೇಷನ್ ಹಗರಣವು ತೀವ್ರ ಚರ್ಚೆಯಲ್ಲಿದೆ.

ಹಗರಣದ ತನಿಖೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಡಿನೋಟಿಫಿಕೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹಲವು ಅಧಿಕಾರಿಗಳ ಹೇಳಿಕೆಯನ್ನು ನಿಯಮ 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ದಾಖಲೆ ಮಾಡಿಸಲು ಮುಂದಾಗಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರಿಂದ ತನಿಖಾಧಿಕಾರಿಗಳು ಹಿಂದೆಯೇ ಹೇಳಿಕೆ ದಾಖಲಿಸಿದ್ದರು.

ಇದೀಗ, ಗುರುವಾರ (ಸೆ.19), ಬೆಂಗಳೂರಿನ 36ನೇ ಎಸಿಎಂಎಂ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹಾಜರಾಗಿದ್ದ ರಾಕೇಶ್ ಸಿಂಗ್ ನಿಯಮ 164ರ ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ‘ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ, ಬೆಂಗಳೂರು ಮಹಾನಗರದ ಗಂಗಾನಗರ (ಗಂಗೇನಹಳ್ಳಿ) ಪ್ರದೇಶದಲ್ಲಿರುವ 1 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಪಿಕೇಷನ್ ಪ್ರಕ್ರಿಯೆ ಆರಂಭಿಸಲಾಗಿತ್ತು’ ಎಂದು ಒಪ್ಪಿಕೊಂಡಿದ್ದಾರೆ.

164ರ ನಿಯಮದಡಿ, ವಿಚಾರಣೆಯ ಹಂತದಲ್ಲಿ ತಪ್ರೊಪ್ಪಿಗೆ ಅಥವಾ ಸಾಕ್ಷ್ಯಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ವಿಚಾರಣೆಯ ಪ್ರಕ್ರಿಯೆಯಲ್ಲಿ ಸಾಕ್ಷಿದಾರರು ಪ್ರತಿಕೂಲ ಹೇಳಿಕೆ ಕೊಡುವುದನ್ನು ತಪ್ಪಿಸಬಹುದು. ಈ ರೀತಿಯ ಹೇಳಿಕೆಯನ್ನು ಆಧರಿಸಿ ತನಿಖಾಧಿಕಾರಿಗಳು ತನಿಖೆಯನ್ನು ತ್ವರಿತವಾಗಿ ಪುರ್ಣಗೊಳಿಸಲು ನೆರವಾಗುತ್ತದೆ.

ಅಂದಹಾಗೆ, ಬೆಂಗಳೂರಿನ ಗಂಗಾನಗರದಲ್ಲಿ 1 ಎಕರೆ 11 ಗುಂಟೆ ಭೂಮಿಯನ್ನು ಸತ್ತವರ ಹೆಸರಿನಲ್ಲಿ ಹಾಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜಂಟಿಯಾಗ ಡಿನೋಟಿಫೈ ಮಾಡಿಸಿದ್ದರು. ಡಿನೋಟಿಫೈ ಆದ ಭೂಮಿಯನ್ನು ಅಂತಿಮವಾಗಿ ಕುಮಾರಸ್ವಾಮಿ ಅವರ ಬಾಮೈದ ಡಾ. ಚನ್ನಪ್ಪ ಎಂಬಾತನ ಹೆಸರಿಗೆ ನೋಂದಣಿ ಮಾಡಿಕೊಡಲಾಗಿತ್ತು. ಈ ಬಗ್ಗೆ 2015ರಲ್ಲಿ ಲೋಕಾಯುಕ್ತಕ್ಕೆ ದೂರನ್ನೂ ನೀಡಲಾಗಿತ್ತು. ಆದರೆ, ದೂರು ದಾಖಲಾಗಿ 9 ವರ್ಷಗಳು ಕಳೆದರೂ ಲೋಕಾಯುಕ್ತ ತನಿಖೆಯನ್ನು ಪೂರ್ಣಗೊಳಿಸದೆ, ನಿರ್ಲಕ್ಷ್ಯ ಧೋರಣೆ ತಳೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ.ಕಾಮ್ ಸಮಗ್ರ ದಾಖಲೆಗಳನ್ನು ಕಲೆ ಹಾಕಿ, ಪ್ರಕರಣವನ್ನು ಬಯಲಿಗೆದಿದೆ. ಇದರಿಂದ, ಹಗರಣದ ತನಿಖೆಗೆ ಮತ್ತೆ ಜೀವ ಬಂದಿದೆ. ಇದೀಗ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಡಿನೋಟಿಫೈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಂದಿನ ಅಧಿಕಾರಿಗಳಾದ ರಾಕೇಶ್ ಸಿಂಗ್‌, ಜ್ಯೋತಿ ರಾಮಲಿಂಗಂ, ನಂದಕುಮಾರ್ ಮತ್ತಿತರ ಅಧಿಕಾರಿಗಳ ಹೇಳಿಕೆಗಳನ್ನು ಲೋಕಾಯುಕ್ತ ದಾಖಲಿಸಿಕೊಳ್ಳುತ್ತಿದೆ.

ಇದೇ ಸಮಯದಲ್ಲಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಹಗರಣದ ಬಗ್ಗೆ ಮಾತನಾಡಿದ್ದಾರೆ. ತ್ವರಿತವಾಗಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!