ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಉತ್ತಮ ಪರಿಸರ ಅವಶ್ಯವಾಗಿದ್ದು,ಉತ್ತಮ ಪರಿಸರ ಸದೃಢ ಆರೋಗ್ಯ ನೀಡುತ್ತದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ತಾಲೂಕಿನ ಸಂತೆಕಸಲಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡಮಿ ಆಯೋಜಿಸಿದ್ದ ಗಿಡ ನೆಡುವ, ಮಕ್ಕಳಿಗೆ ಗಿಡ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಪರಿಸರದಿಂದ ಉಚಿತವಾಗಿ ಎಲ್ಲಾ ಸಂಪತ್ತನ್ನು ಪಡೆದುಕೊಳ್ಳುತ್ತಿದ್ದೇವೆ.ಆದರೆ ಪರಿಸರಕ್ಕೆ ನಾವು ವಿಷಯುಕ್ತ ಪದಾರ್ಥಗಳನ್ನು ನೀಡುತ್ತಿದ್ದೇವೆ. ಮಾನವ ಸಂಪತ್ತು ಉಳಿದು ಬೆಳವಣಿಗೆ ಕಾಣಲು ಪ್ರಕೃತಿಗೆ ಹಸಿರು ಹೊದಿಕೆ ನೀಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ಅಧ್ಯಕ್ಷ ಎಂ.ಜಯರಾಮ್ ಮಾತನಾಡಿ, ಆಮ್ಲಜನಕ ಹೆಚ್ಚು ಬಿಡುಗಡೆ ಮಾಡುವ ಅರಳಿ, ಆಲ, ಹುಣಸೆ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಮಾಡಬೇಕಿದೆ.ಪ್ರತಿ ಮನೆಗೊಂದು ಮರ ಅಗತ್ಯವಿದೆ.ವಿದ್ಯಾರ್ಥಿ ದಿಸೆಯಲ್ಲೇ ಪರಿಸರ ಕಾಳಜಿ ಬೆಳೆಸಿಕೊಳ್ಳುವುದು ಉತ್ತಮ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಧಿಕಾರಿಗಳು ಶಾಲಾ ಆವರಣದಲ್ಲಿ ಅಮ್ಲಜನಕ ಹೆಚ್ಚು ಬಿಡುಗಡೆ ಮಾಡುವ ಮತ್ತು ಹಲವಾರು ಔಷಧಿ ಸಸ್ಯಗಳನ್ನು ನೆಟ್ಟು ನೀರೆರೆದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಬೆಟ್ಟಯ್ಯ, ಗಣಿತ ವಿಷಯ ಪರೀಕ್ಷಕ ಎಸ್.ಲೋಕೇಶ್, ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಲೋಕೇಶ್, ಮುಖ್ಯಶಿಕ್ಷಕ ಹುಸೇನ್, ಲಿಂಗಪಟ್ಟಣ ಪಿಡಿಒ ನಾಗೇಂದ್ರ ಹಾಗೂ ವಿದ್ಯಾರ್ಥಿಗಳು ಇದ್ದರು