ರೈಲ್ವೇ ಸಚಿವಾಲಯವು “ಆಜಾದಿ ಕಾ ಅಮೃತ ಮಹೋತ್ಸವಕ್ಕೆ” ಸಂಬಂಧಿಸಿದಂತೆ ಪಾರಂಪರಿಕ “ಆಜಾದಿ ಕಿ ರೈಲ್ ಗಾಡಿ ಔರ್ ನಿಲ್ದಾಣಗಳ” ಸಾಪ್ತಾಹಿಕದ ಆಚರಣೆಗಳ ಮುಕ್ತಾಯ ಸಮಾರಂಭ ಮದ್ದೂರು ರೈಲು ನಿಲ್ದಾಣದಲ್ಲಿ ನಡೆಯಿತು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದುರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಸಂದರ್ಭವನ್ನು ನೆನೆಪಿಸಿಕೊಂಡು,ಇಂದು ನಡೆಯುತ್ತಿರುವ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮಾತನಾಡಿ, ರೈಲ್ವೇ ಸಚಿವಾಲಯವು “ಆಜಾದಿ ಕಾ ಅಮೃತಮಹೋತ್ಸವಕ್ಕೆ” ಸಂಬಂಧಿಸಿದಂತೆ ಜುಲೈ 18 ರಿಂದ 23ನೇ ಜುಲೈ, 2022 ರವರೆಗೆ ಪಾರಂಪರಿಕ “ಆಜಾದಿ ಕಿ ರೈಲ್ ಗಾಡಿ ಔರ್ ನಿಲ್ದಾಣಗಳ” ಸಾಪ್ತಾಹಿಕವನ್ನು ಆಚರಿಸುತ್ತದೆ. ಕಾರ್ಯಕ್ರಮದ ಸಮಯದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದಂತೆ ರೈಲು ನಿಲ್ದಾಣಗಳು ಮತ್ತು ರೈಲುಗಳ ಬಗ್ಗೆ ಗಮನ ಸೆಳೆಯುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದೇಶಾದ್ಯಂತ 75 ನಿಲ್ದಾಣಗಳನ್ನು ಆಜಾದಿ ಕಿ ರೈಲು ನಿಲ್ದಾಣಗಳೆಂದು ನಾಮಕರಣ ಮಾಡಲಾಗಿದೆ. ಮದ್ದೂರು ರೈಲು ನಿಲ್ದಾಣವನ್ನು ಬೆಂಗಳೂರು ವಿಭಾಗದ ಆಜಾದಿ ಕಿ ಸ್ಟೇಷನ್ಗಳಲ್ಲಿ ಒಂದಾಗಿ ನಾಮನಿರ್ದೇಶನ ಮಾಡಲಾಗಿದೆ. ಹೀಗಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಅಪೂರ್ವ ಚಂದು ಮಾತನಾಡಿ, ಅಮೃತ ಮಹೋತ್ಸವದ ಅಂಗವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈಲ್ವೇ ಇಲಾಖೆಯ ಸಹಕಾರ ಮಹತ್ವದಾಗಿತ್ತು. ಈ ಮೂಲಕ ಇಂದಿನ ಯುವಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹಾಗೂ ದೇಶಾಭಿಮಾನ ಮೂಡಿಸುವಂತಹ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಬೆಂಗಳೂರು ವಿಭಾಗೀಯ ರೈಲ್ವೇ ವ್ಯವಸ್ಥಾಪಕರಾದ ಶ್ಯಾಮ್ ಸಿಂಗ್ರವರ ನೇತೃತ್ವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಟಿ.ಚಂದುರವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಬೆಂಗಳೂರು ಹಿರಿಯ ವಿಭಾಗೀಯ ಅಧಿಕಾರಿ ಅರುಣ್ ರವಿಚೆಟ್ಟು ಮತ್ತಿತರರು ಉಪಸ್ಥಿತರಿದ್ದರು.