ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ,ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯತಿಗೆ ಹಿಮಾಚಲ ಪ್ರದೇಶದ ಗ್ರಾ.ಪಂ.ಸದಸ್ಯರು ಹಾಗೂ 21 ಅಧಿಕಾರಿಗಳ ತಂಡ ಭೇಟಿ ನೀಡಿ ವೀಕ್ಷಣೆ ಮಾಡಿತು.
ಹಿಮಾಚಲ ಪ್ರದೇಶದ ಅಧ್ಯಯನ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡ ಹೆಮ್ಮನಹಳ್ಳಿ ಪಿಡಿಓ ಲೀಲಾವತಿ ಅವರಿಗೆ ಅಗತ್ಯವಾದ ಸಂಪೂರ್ಣ ಮಾಹಿತಿ ನೀಡಿದರು.
ರಾಜ್ಯ ಜಲಾನಯನ, ಪಂಚಾಯತ್ ರಾಜ್ ಇಲಾಖೆ ವತಿಯಿಂದ ಉತ್ತಮವಾಗಿ ಯೋಜನೆಗಳ ಅನುಷ್ಠಾನ ಗೊಳಿಸಿರುವ
ಗ್ರಾ.ಪಂ.ಗಳಿಗೆ ಭೇಟಿ ನೀಡಿದ ಹಿಮಾಚಲ ಪ್ರದೇಶದ ಗ್ರಾ.ಪಂ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಸ್ಥಿತಿಗತಿಗಳ ಅಧ್ಯಯನ ನಡೆಸಿತು.
ಹೆಮ್ಮನಹಳ್ಳಿ ಗ್ರಾ.ಪಂ. ಘನ ತ್ಯಾಜ್ಯ ಕಸ ವಿಲೇವಾರಿ ಘಟಕ, ಅಂಗನವಾಡಿ ಕೇಂದ್ರ,ಗ್ರಂಥಾಲಯ, ಗ್ರಾಮದ ಕೆರೆ-ಕಟ್ಟೆಗಳ ವೀಕ್ಷಣೆ ಮಾಡುವ ಜೊತೆಗೆ ಗ್ರಾ.ಪಂ.ನ ಕಾರ್ಯವೈಖರಿ, ಗ್ರಾ.ಪಂ.ಗಳಿಗೆ ಬರುವ ಆದಾಯಗಳ ಮಾಹಿತಿ ಪಡೆಯುವ ಜೊತೆಗೆ ಪಿಡಿಓ ಅವರ ಕಾರ್ಯ ಮತ್ತು ಜವಾಬ್ದಾರಿಗಳು ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಪಡೆದರು.
ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದೀಶ್ ಗೌಡ ಹಾಗೂ ಸದಸ್ಯರು ಹಿಮಾಚಲ ಪ್ರದೇಶ ತಂಡದ ಸದಸ್ಯರನ್ನು ಹೂವಿನ ಹಾರ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮೀನಾಕ್ಷಿ, ಗ್ರಾ.ಪಂ. ಸದಸ್ಯರಾದ ನಾಗೇಶ್, ಮಹದೇವಮ್ಮ, ಕಮಲಾಕ್ಷಿ ,ವೀಣಾ, ಮಂಡ್ಯ ಜಿ.ಪಂ.ಸಹಾಯಕ ಕಾರ್ಯದರ್ಶಿ
ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.