ಮಂಡ್ಯ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಬಲಮುರಿ ಗಣಪತಿ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಎಂ. ಶ್ರೀನಿವಾಸ್ ಮತ್ತು ನಗರಸಭಾ ಅಧ್ಯಕ್ಷ ಮಂಜು ಅವರಿಗೆ ಸ್ಥಳೀಯ ನಿವಾಸಿಗಳು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ್ ಅವರು ಕಾಲೋನಿ ನಾಗರಿಕರ ಮನವಿ ಸ್ವೀಕರಿಸಿ ಮಾತನಾಡಿ,ಹೌಸಿಂಗ್ ಬೋರ್ಡ್ ಕಾಲೋನಿಯ ಸಮಗ್ರ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ದೇವಾಲಯದ ಕಾಂಪೌಂಡ್ ಗೋಡೆ ನಿರ್ಮಾಣ, ಶೌಚಾಲಯ ನಿರ್ಮಾಣ, ಉದ್ಯಾನವನ ಅಭಿವೃದ್ಧಿ ಕಾರ್ಯವನ್ನು ಶ್ರೀಘ್ರದಲ್ಲಿ ಶಾಸಕರ ಅನುದಾನ ಮತ್ತು ನಗರಸಭೆಯ ಅನುದಾನದಲ್ಲಿ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ನಗರದ ಕಾವೇರಿ ನಗರದಲ್ಲಿರುವ ಹೌಸಿಂಗ್ ಬೋರ್ಡ್ ಕಾಲೋನಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಹೌಸಿಂಗ್ ಬೋರ್ಡ್ ಗೆ 60 ಲಕ್ಷ ರೂ.ವಿಶೇಷ ಅನುದಾನ ನೀಡಲಾಗಿದೆ. ಇನ್ನೆರಡು, ಮೂರು ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಬರುವ ಆಯಾಯ ವಾರ್ಡ್ ಗಳ ಉದ್ಯಾನವನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ಮಾಡುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಕಿರಣ್, ಶ್ರೀಕಾಂತ್, ಸತೀಶ್, ಬಿ.ಪಿ. ಪ್ರಕಾಶ್, ತುಳಸೀಧರ್ ಇತರರು ಭಾಗವಹಿಸಿದ್ದರು.