Tuesday, September 17, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಜಾತ್ರೆ| ನಾಲ್ಕು ವರ್ಗಗಳಾಗಿ ಅತಿಥಿಗಳನ್ನು ವಿಂಗಡಿಸಿ ವಸತಿ ವ್ಯವಸ್ಥೆ – ರವಿಕುಮಾರ್

ಮುಂಬರುವ ಡಿಸೆಂಬರ್ ೨೦,೨೧, ಮತ್ತು ೨೨ ರಂದು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳನ್ನು ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ನೋಂದಾಯಿತ ಸದಸ್ಯರು ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ವಸತಿ ಸೌಲಭ್ಯ ಕಲ್ಪಿಸೋಣ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಸಲಹೆ ನೀಡಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ವಸತಿ ಸಮಿತಿ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು.

ಸೆ.೧೫ ರೊಳಗೆ ಸಮ್ಮೇಳನದ ನೋಂದಣಿ ಸಮಿತಿಯೊಂದಿಗೆ ಸಭೆ ನಡೆಸಿ ವಸತಿ ಕಲ್ಪಿಸಬಹುದಾದ ಹೋಟೆಲ್‌ಗಳು, ಸಮುದಾಯ ಭವನಗಳು, ಹಾಸ್ಟೆಲ್‌ಗಳು, ರೆಸಾರ್ಟ್ ಪಟ್ಟಿ ತಯಾರಿಸಲಾಗುವುದು. ಈ ಕೆಲಸಕ್ಕಾಗಿ ಪಿಡಿಒ ,ಇಓಗಳು ಮತ್ತು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರನ್ನು ಬಳಸಿಕೊಳ್ಳಲಾಗುವುದು ಎಂದರು.

ಸಮ್ಮೇಳನಕ್ಕೆ ಬಂದವರನ್ನು ‘ಮನೆ ಅತಿಥಿ’ಯಾಗಿ ಉಳಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗುವುದು. ಸಾಮಾಜಿಕ ಜಾಲತಾಣಗಳು ಮತ್ತು ನಗರದಲ್ಲಿ ರ‍್ಯಾಲಿಗಳನ್ನು ನಡೆಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್ ಮುಂತಾದ ಕಡೆ ಸಮ್ಮೇಳನದ ಲೋಗೋವನ್ನು ಒಳಗೊಂಡ ಫ್ಲೆಕ್ಸ್ಗಳನ್ನು ಶೀಘ್ರವೇ ಅಳವಡಿಸಲಾಗುವುದು. ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಸೂಚಿಸಲಾಗುವುದು ಎಂದರು.

ಶಿಕ್ಷಣ, ಕಂದಾಯ ಇಲಾಖೆ ಮತ್ತು ಉಪ ಸಮಿತಿಯ ಸದಸ್ಯರನ್ನು ಬಳಸಿಕೊಂಡು ಸಾಧಕ ಬಾಧಕಗಳನ್ನು ನೋಡಿಕೊಂಡು ವಸತಿ ಪ್ರದೇಶಗಳನ್ನು ನಿರ್ಧರಿಸಲಾಗುವುದು. ಅದಕ್ಕೂ ಮುನ್ನ ಹೋಟೆಲ್ ಮಾಲೀಕರ, ಸಮುದಾಯ ಭವನಗಳ ಮಾಲೀಕರ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಸಭೆಯ ಆರಂಭಕ್ಕೂ ಮುನ್ನ ಉಪವಿಭಾಗಾಧಿಕಾರಿ ಶಿವಮೂರ್ತಿ ವಸತಿ ಸಮಿತಿಯ ರೂಪುರೇಷೆಗಳನ್ನು ನೀಡಿ, ಡಿಸೆಂಬರ್ ೧೦ ರೊಳಗೆ ನೋಂದಾಯಿಸಿಕೊಂಡ ಸದಸ್ಯರಿಗೆ ಮಾತ್ರ ವಸತಿ ಕಲ್ಪಿಸಬಹುದು. ಮಂಡ್ಯ,ಮದ್ದೂರು, ಶ್ರೀರಂಗಪಟ್ಟಣ, ಮೈಸೂರು ಮುಂತಾದ ಕಡೆಗಳಲ್ಲಿ ಇರುವ ಹೋಟೆಲ್, ಸಮುದಾಯ ಭವನ, ಹಾಸ್ಟೆಲ್‌ಗಳು, ರೆಸಾರ್ಟ್ಗಳನ್ನು ಗುರುತಿಸಲಾಗುವುದು. ಸಮ್ಮೇಳನಕ್ಕ್ಕೆ ನೋಂದಣಿ ಮಾಡಿಸಿಕೊಂಡ ಸದಸ್ಯರಿಗೆ ವಸತಿ ವ್ಯವಸ್ಥೆ ನೀಡಲು ಆದ್ಯತೆ ನೀಡಲಾಗುವುದು. ಮೂರು ದಿನ ಮುಂಚೆ ವಸತಿಗೆ ನಿಗದಿಪಡಿಸಿದ ಕಟ್ಟಡಗಳನ್ನು ಸಮಿತಿಯ ವಶಕ್ಕೆ ಪಡೆಯಬೇಕು ಎಂದರು.

ಸಮ್ಮೇಳನ ಸಮನ್ವಯ ಸಮಿತಿ ಸಂಚಾಲಕರಾದ ಮೀರಾ ಶಿವಲಿಂಗಯ್ಯ ಮಾತನಾಡಿ ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ೧೦,೦೦೦ ಜನಕ್ಕೆ ವಸತಿ ಕಲ್ಪಿಸಲಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು.ಕಲಾತಂಡಗಳನ್ನು ಸಮುದಾಯ ಭವನಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಬಹುದು ಎಂದರು.

ಸಮಿತಿಯ ಸದಸ್ಯ ಟಿ.ಎಸ್.ಸತ್ಯಾನಂದ ಮಾತನಾಡಿ ಅತಿ ಮುಖ್ಯ ಗಣ್ಯರಿಗೆ ಅಮರಾವತಿ ಹೋಟೆಲ್‌ನಲ್ಲಿ ವಸತಿ ಕಲ್ಪಿಸಿ ಉಳಿದವರಿಗೆ ಮೈಸೂರಿನಲ್ಲಿ ಮಾಡಬೇಕಾಗುತ್ತದೆ. ವಸತಿ ವ್ಯವಸ್ಥೆ ಕಲ್ಪಿಸುವ ಕಟ್ಟಡಗಳಿಗೆ ಖ್ಯಾತ ಕವಿಗಳ ಹೆಸರುಗಳನ್ನು ಇಡಬೇಕು. ಪತ್ರಿಕಾ ಪ್ರಕಟಣೆ ನೀಡಿ ಆಸಕ್ತಿಯುಳ್ಳ ಜನರು ‘ಮನೆ ಅತಿಥಿ’ಯಾಗಿ ವಾಸ್ತವ್ಯ ನೀಡಲು ಬಯಸುವವರ ಪಟ್ಟಿ ಮಾಡಬಹುದು. ಇನ್ಫೋಸಿಸ್ ಸಂಸ್ಥೆಯಲ್ಲಿ ೧೦೦೦ ಜನಕ್ಕೆ ವಸತಿ ಕಲ್ಪಿಸಬಹುದು ಎಂಬ ಸಲಹೆ ನೀಡಿದರು.

ಸಮಿತಿ ಸದಸ್ಯ ಅಪೂರ್ವಚಂದು ಈ ಹಿಂದೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿತ ವಾದ ವಿಷಯಗಳನ್ನು ಸಭೆಯ ಮುಂದಿಟ್ಟರು. ನೋಡಲ್ ಅಧಿಕಾರಿಗಳು ಮತ್ತು ಮಾಹಿತಿ ಕೇಂದ್ರಗಳನ್ನು ಸಮ್ಮೇಳನಕ್ಕೆ ಬರುವವರಿಗೆ ಮಾರ್ಗದರ್ಶನ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಂ, ತಹಸಿಲ್ದಾರ್ ಶಿವಕುಮಾರ್ ಬಿರಾದಾರ, ಬೇಲೂರು ಸೋಮಶೇಖರ್, ಕುರುಬರ ಸಂಘದ ಅಧ್ಯಕ್ಷ ಸುರೇಶ್, ಎಚ್.ಕೆ. ರುದ್ರಪ್ಪ,ಸತ್ಯಪ್ಪ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ ಪಣ್ಣೆದೊಡ್ಡಿ, ಬಿ.ಎಂ.ಅಪ್ಪಾಜಪ್ಪ, ಹೊಳಲು ಶ್ರೀಧರ್, ಧನಂಜಯ ದರಸಗುಪ್ಪೆ, ಎಲ್.ಕೃಷ್ಣ, ಸುನಿಲ್ ಕುಮಾರ್, ಹನುಮಂತಯ್ಯ, ದೇವರಾಜು ಕೊಪ್ಪ ಮುಂತಾದವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!