ನಾಗಮಂಗಲ ತಾಲೂಕಿನ ಅದ್ದಿಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಇರುವ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಕಳೆದ ಡಿ.18ರಿಂದ 23ರವರೆಗೆ ನಡೆದ ಪಿ.ಯು ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪ ಮೇಲೆ ನಾಗಮಂಗಲ ಪಟ್ಟಣದ ಜೂನಿಯರ್ ಕಾಲೇಜಿನ ಪ್ರೌಢಶಾಲೆಯ ಸಹ ಶಿಕ್ಷಕ ಕೆ ಎನ್ ರಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರ ಮತ್ತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲ್ ಇನ್ ಎಜುಕೇಶನ್ ಸಂಸ್ಥೆ ಜೊತೆ ಕೈಜೋಡಿಸಿ ವಿದ್ಯಾರ್ಥಿಗಳಿಗೆ ಡಿಸೆಂಬರ್ ನಲ್ಲಿ ಅಕ್ರಮವಾಗಿ ಪರೀಕ್ಷೆ ಬರಸಿದ್ದರು, ಅಕ್ರಮ ಪರೀಕ್ಷೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ಜಂಟಿ ತನಿಖೆಗೆ ಆದೇಶಿಸಲಾಗಿತ್ತು, ತನಿಖಾ ತಂಡವು ಶಾಂತಿನಿಕೇತನ ಪ್ರೌಢಶಾಲೆ ಮತ್ತು ನಾಗಮಂಗಲ ಪಟ್ಟಣದ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿತ್ತು. ತನಿಖೆ ವೇಳೆಯಲ್ಲಿ ಪಿಯು ಪರೀಕ್ಷೆಗೆ ಹಲವಾರು ಮಕ್ಕಳನ್ನು ಶಿಕ್ಷಕ ರಮೇಶ್ ಸೇರ್ಪಡೆ ಮಾಡಿ, ದಿನನಿತ್ಯ ಶಾಲೆಗೆ ಕರೆದುಕೊಂಡು ಬರುತ್ತಿದ್ದದನ್ನು ಪ್ರೌಢಶಾಲೆಯ ನೌಕರರು ಖಚಿತಪಡಿಸಿದ್ದರು.
ಅಲ್ಲದೇ ಶಿಕ್ಷಕ ಕೆ ಎನ್ ರಮೇಶ್ ಅಕ್ರಮ ಪರೀಕ್ಷೆಗೆ ಮಾರ್ಗದರ್ಶನ ನೀಡಿರುವುದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಪರೀಕ್ಷಾ ವೇಳೆಯಲ್ಲಿ ಆತ ಹಾಜರಿದ್ದದ್ದು ದೃಢಪಟ್ಟಿದ್ದು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಶಿಸ್ತು ಪಾಲನಾ ಸಮಿತಿಯು ಸರ್ಕಾರಿ ನೌಕರರಿಗೆ ಅನಾವಶ್ಯಕವಾದ ಖಾಸಗಿ ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಸ್ಕೂಲ್ ಎಜುಕೇಶನ್ ಮುಕ್ತ ಶಾಲಾ ಪರೀಕ್ಷಾ ಕೇಂದ್ರಕ್ಕೆ ಅತಿಕ್ರಮವಾಗಿ ಹೋಗಿರುವುದು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಅವರನ್ನು ಅಮಾನತು ಮಾಡಿದೆ.