ಡಿಸೆಂಬರ್ 13 ರಿಂದ 23ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ರೈತರು ಹಾಗೂ ಕಬ್ಬುಬೆಳೆಗಾರರ ಸಮಸ್ಯೆಗಳನ್ನು ಚರ್ಚೆ ನಡೆಸಲಾವುದು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಭರವಸೆ ನೀಡಿದರು.
ಕಳೆದ 6 ದಿನಗಳಿಂದ ಮಂಡ್ಯನಗರದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಗೆ ಬೆಂಬಲ ವ್ಯಕ್ತಪಡಿಸಿ ರೈತರನ್ನುದ್ಧೇಶಿಸಿ ಅವರು ಮಾತನಾಡಿದರು.
ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ, ಅವರು ರಾಜ್ಯಕ್ಕೆ ಪ್ರಧಾನಿಯವರು ಭೇಟಿ ನೀಡುತ್ತಿರುವುದರಿಂದ ಆ ಕಾರ್ಯಕ್ರಮ ಮುಗಿದ ನಂತರ ಮುಂದಿನ ವಾರ ರೈತ ಮುಖಂಡರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಅಲ್ಲದೇ ಟನ್ ಕಬ್ಬಿಗೆ 500 ರೂ. ಬೆಂಬಲ ಬೆಲೆ ನೀಡಬೇಕೆಂಬುದು ನಮ್ಮ ಒತ್ತಾಯವು ಆಗಿದೆ. ಪ್ರಸ್ತುತ ಮೈಷುಗರ್ ನಲ್ಲಿ ದಿನವೊಂದಕ್ಕೆ 1,500 ಕಬ್ಬು ನುರಿಸುತ್ತಿದ್ದು, ಇದರ ಪ್ರಮಾಣವನ್ನು 5,000 ಟನ್ ಗೆ ಹೆಚ್ಚಿಸಬೇಕು ಹಾಗೂ ಮೈಷುಗರ್ ಗೆ ಬಾಕಿ ಇರುವ 20 ಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯವಾಗಿದೆ ಎಂದರು.