ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಲು ನಿರ್ಧರಿಸಿದ್ದು ಈ ನೇಮಕಾತಿಯಲ್ಲಿ ನಗರಸಭೆ ಹಾಗೂ ಪಾಲಿಕೆಗಳ ಪೌರಕಾರ್ಮಿಕರಿಗೆ ಅನ್ಯಾಯ ಎಸಗಿದ್ದು, ಕೂಡಲೇ ಎಲ್ಲಾ ಪೌರಕಾರ್ಮಿಕನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಕಾರ್ಮಿಕರ ಸಂಘ ಗುರುವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪುರಸಭೆ ಪಟ್ಟಣ ಪಂಚಾಯತಿಗಳಲ್ಲಿ ಶೇ ನೂರಕ್ಕೆ ನೂರರಷ್ಟು ಪೌರ ಕಾರ್ಮಿಕ ಹುದ್ದೆಗಳನ್ನು ತುಂಬುತ್ತಿದ್ದು ನಗರಸಭೆ ಹಾಗೂ ಪಾಲಿಕೆಗಳಲ್ಲಿ ಶೇ.50ರಷ್ಟು ಮಾತ್ರ ಮಂಜೂರಾದ ಹುದ್ದೆಗಳನ್ನು ತುಂಬುತ್ತಿದ್ದು, ಇನ್ನುಳಿದ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲಿ ಮುಂದುವರಿಸಲು ನಿರ್ಧರಿಸಿರುವುದು ತಾರತಮ್ಯದ ಕ್ರಮವಾಗಿದೆ. ಇದರಿಂದಾಗಿ ಮಂಡ್ಯ ನಗರಸಭೆಯ 160 ಮಂದಿ ಪೌರಕಾರ್ಮಿಕರ ಪೈಕಿ 36 ಮಂದಿ ಕಾರ್ಮಿಕರು ಖಾಯಂಗೊಳ್ಳಲಿದ್ದು ಇನ್ನುಳಿದವರು ನೇರ ಪಾವತಿ ಹಾಗೂ ಗುತ್ತಿಗೆಯಲ್ಲಿ ಮುಂದುವರಿಯುವಂತಾಗಿದೆ. ಬದಲಿಗೆ ಎಲ್ಲ ಪೌರಕಾರ್ಮಿಕರನ್ನು ಏಕಕಾಲಕ್ಕೆ ನೇರನೇಮಕಾತಿ ಗೊಳಿಸುವಂತೆ ಪ್ರತಿಭಟನಾಕರರು ಆಗ್ರಹಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಸದ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ಸೇರಿದಂತೆ ಇನ್ನುಳಿದ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ಒಳಪಡಿಸಬೇಕು. ಇದರಿಂದ ಸರಕಾರ ಅನಗತ್ಯವಾಗಿ ಶೇ.18 ಜಿಎಸ್ ಟಿ ಪಾವತಿಸುವುದು ಹಾಗೂ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಶೇ.5ರ ಸೇವಾ ಶುಲ್ಕವು ಸರಕಾರಕ್ಕೆ ಉಳಿಯಲಿದ್ದು ಈ ಎಲ್ಲ ವೆಚ್ಚವನ್ನು ಹೊರಗುತ್ತಿಗೆ ನೌಕರರಿಗೆ ನೀಡಿ ನೌಕರರ ದಕ್ಷತೆ ಹೆಚ್ಚಿಸಬಹುದಾಗಿದೆ. ಈ ಸಂಬಂಧ ಹಣಕಾಸು ಇಲಾಖೆ ಮುಂದಿರುವ ಪ್ರಸ್ತಾವನೆಗೆ ಸರಕಾರ ಅ೦ಗೀಕಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮುಖಂಡರಾದ ಸೋಮಸುಂದರ್, ಎನ್.ನಾಗರಾಜು ಹಾಗೂ ಗೌರಮ್ಮ ಮತ್ತಿತರರು ಭಾಗವಹಿಸಿದ್ದರು.