ಭಾರತದ ಸ್ವಾಯತ್ತತೆ ಹಾಗೂ ಅಭಿವೃದ್ಧಿ ಶಕೆಗೆ ಗಾಂಧೀಜಿ ಪ್ರೇರಣೆಯಾಗಿದ್ದರು. ದೇಶ ದೊಡ್ಡದು ಎಂಬ ಚಿಂತನೆಯಿಂದ ತ್ಯಾಗ ಮತ್ತು ಸೇವೆಗೆ ನಮ್ಮನ್ನು ಮೀಸಲಾಗಿಸಿಕೊಳ್ಳಬೇಕು. ಸತ್ಯ ಮತ್ತು ಶಾಂತಿ ಹಾಗೂ ಅಹಿಂಸಾ ಪಾಲನೆಗೆ ಮುಂದಾಗಬೇಕೆಂಬುದು ಮೈಸೂರಿನ ಮಾನಸ ಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ವಿಜಯ ಕುಮಾರಿ ಕರಿಕಲ್ ತಿಳಿಸಿದರು.
ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಕಾಲೋನಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರಾವರಣ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನ್ ಚೇತನರ ಜಯಂತಿಗಳು, ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳಿಗೆ ಅರ್ಥ ಬರುತ್ತದೆ. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ದೇಶವಾಸಿಗಳನ್ನು ಮುಕ್ತಗೊಳಿಸಲು ಅಹಿಂಸಾತ್ಮಕ ಹೋರಾಟ ನಡೆಸಿದ ಮಹಾತ್ಮ ಗಾಂಧೀಜಿಯವರ ಸ್ಮರಣೆ ನಮ್ಮೆಲ್ಲರಿಗೂ ಸ್ಪೂರ್ತಿ ಎಂದರು.
ಗಾಂಧೀಜಿ, ಮಹರ್ಷಿ ವಾಲ್ಮೀಕಿ, ಬುದ್ಧ, ಬಸವಣ್ಣರಂತಹ ಮಹಾತ್ಮರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗೋಣ. ಮಹರ್ಷಿ ವಾಲ್ಮೀಕಿರವರ ಬೋಧನೆ ಹಾಗೂ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನವನ್ನು ನಡೆಸಿಕೊಂಡು ಹೋಗುವುದಕ್ಕೆ ಸಾಧ್ಯ ಎಂದರು.
ಅಕ್ಕಮಹಾದೇವಿ ಮಹಿಳಾ ವಿವಿಯ ಆಡಳಿತಾಧಿಕಾರಿ ಪ್ರೊ.ಹೆಚ್.ಎಂ.ಹೇಮಲತ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಾರಾಯಣ ಪವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.