ರಾಷ್ಟ್ರಕವಿ ಕುವೆಂಪು
ನಾನು ಹಿಂದಿ ಭಾಷೆಯನ್ನು ದ್ವೇಷಿಸುವುದಿಲ್ಲ, ಆದರೆ ಕೆಲವೊಮ್ಮೆ ಕಪಟತನದಿಂದ, ಹಲವೊಮ್ಮೆ ಬಲವಂತದಿಂದ ಅದನ್ನು ದೇಶದ ಇತರ ಭಾಷಿಕ ನಾಗರಿಕರ ಮೇಲೆ ಹೇರುವುದನ್ನು ವಿರೋಧಿಸುತ್ತೇನೆ.
ಇದು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಸ್ತಿತ್ವದ ಪ್ರಶ್ನೆ ಮತ್ತು ನಮ್ಮ ಆತ್ಮ ಗೌರವದ ಪ್ರಶ್ನೆ. ಇಂದು ದೇಶದಲ್ಲಿ ನಡೆಯುತ್ತಿರುವುದು ಹಿಂದಿ ಭಾಷಿಕರ ಯಜಮಾನಿಕೆ. ಈಗಾಗಲೇ ಇದನ್ನು ವಿರೋಧಿಸುವುದರಲ್ಲಿ ನಾವು ತಡ ಮಾಡಿದ್ದೇವೆ. ನಾವು ಇನ್ನೂ ಸುಮ್ಮನಿದ್ದರೆ ಅವರ ದಾಸ್ಯಕ್ಕೊಳಗಾವುದರ ಹೊರತಾಗಿ ಬೇರೆ ದಾರಿ ಇಲ್ಲವಾಗುವ ಸನ್ನಿವೇಶ ಉಂಟಾಗುತ್ತದೆ.
ಒಂದು ದೇಶವು ಒಂದೇ ಧರ್ಮ, ಒಂದೇ ಭಾಷೆ ಹೊಂದಿರಬೇಕೆಂಬ ನಿಲುವು ಒಕ್ಕೂಟ ವ್ಯವಸ್ಥೆಗೆ ಮಾರಕ. ಹಿಂದಿ ಭಾಷೆ ಮಾತನಾಡುವ ಪ್ರದೇಶದ ಜನ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಹುಕಾಲ ಆಡಳಿತ ಚುಕ್ಕಾಣಿ ಹಿಡಿದಿರುವುದು ಇದೇ ಕಾರಣಕ್ಕಾಗಿ. ದೆಹಲಿ ನಮ್ಮದೆಂದು ನನಗೆ ಹೆಮ್ಮೆ ಅನಿಸದಿರುವುದು ಈ ಕಾರಣಕ್ಕಾಗಿಯೆ.
ಅಲ್ಲಿನ ಹಿಂದಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಉಳಿದ ಭಾಷಿಕ ಅದರಲ್ಲೂ ದಕ್ಷಿಣದ ದ್ರಾವಿಡ ಭಾಷಿಕ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಯಕಶ್ಚಿತ್ತವಾಗಿ ಕಾಣುವದರ ಹಿಂದೆ ಈ ಯಜಮಾನಿಕೆಯೇ ಕಾರಣ. ಆದ್ದರಿಂದ ಈ ದೇಶದ ಯಾವ ಸ್ವಾಭಿಮಾನಿಯೂ ಹಿಂದಿ ಮತ್ತು ಹಿಂದಿಯವರ ಈ ರೀತಿಯ ಯಜಮಾನಿಕೆಯನ್ನು ಒಪ್ಪಲಾರ. ಹಿಂದಿ ಯಜಮಾನ್ಯವನ್ನು ವಿರೋಧಿಸುವುದು ನನ್ನ ಹಕ್ಕು ಮತ್ತು ಕರ್ತವ್ಯ ಎರಡೂ ಆಗಿವೆ.