ಜಮ್ಮು-ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಸೇನೆಯ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಅನಾರೋಗ್ಯದಿಂದ ನಿಧನರಾದ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ವೀರಯೋಧ ಜನಾರ್ಧನ್ಗೌಡ(30) ಅವರ ಅಂತ್ಯಕ್ರಿಯೆಯು ಶನಿವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾಧಿಕಾರಿ ಡಾ.ಕುಮಾರ್, ಶಾಸಕ ಎಚ್.ಟಿ.ಮಂಜು, ತಹಸೀಲ್ದಾರ್ ನಿಸರ್ಗಪ್ರಿಯ ಅವರ ಸಮ್ಮುಖದಲ್ಲಿ ಹುಟ್ಟೂರು ಕಿಕ್ಕೇರಿ ಗ್ರಾಮದಲ್ಲಿ ನಡೆಯಿತು.
ಕಿಕ್ಕೇರಿ ಗ್ರಾಮದಲ್ಲಿ ವಾಸವಿರುವ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಮತ್ತು ಭಾರತಿ ಪ್ರಕಾಶ್ ದಂಪತಿಗಳ ಪುತ್ರರಾಗಿರುವ ಜನಾರ್ಧನ್ ಗೌಡ(39) ಮೃತ ಯೋಧರಾಗಿದ್ದಾರೆ.
2014ರ ಡಿಸೆಂಬರ್ ತಿಂಗಳಿನಲ್ಲಿ ಭಾರತೀಯ ಸೇನೆಗೆ ಯೋಧನಾಗಿ ಆಯ್ಕೆಯಾಗಿದ್ದ ಜನಾರ್ಧನ್ಗೌಡ ಜಮ್ಮು-ಕಾಶ್ಮೀರದ ಶ್ರೀನಗರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಕಳೆದ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಗೆಳೆಯರು ಈತನಿಗೆ ಪ್ರೀತಿಯಿಂದ ಜಾನು ಎಂದು ಕರೆಯುತ್ತಿದ್ದರು. 2019ರಲ್ಲಿ ರಂಜಿತಾ ಅವರೊಂದಿಗೆ ವಿವಾಹವಾಗಿದ್ದು ದಂಪತಿಗಳಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ವೀರಯೋಧ ಜನಾರ್ಧನ್ಗೌಡ ಕಳೆದ 3 ತಿಂಗಳ ಹಿಂದೆಯಷ್ಟೇ ಹುಟ್ಟೂರು ಕಿಕ್ಕೇರಿ ಗ್ರಾಮಕ್ಕೆ ಭೇಟಿ ನೀಡಿ ಕರ್ತವ್ಯಕ್ಕೆ ವಾಪಸ್ಸಾಗಿದ್ದರು.
ಕಳೆದ ಹಲವು ದಿನಗಳಿಂದ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಜನಾರ್ಧನ್ ಗೌಡ ಅವರಿಗೆ ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಂಡಿಗಡದ ಕಮಾಂಡರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಚಾರವನ್ನು ಸಹೋದರ ಮಹೇಂದ್ರ ಅವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಚಂಡಿಗಡ ಆಸ್ಪತ್ರೆಗೆ ಹೋಗಿದ್ದು, ಸಹೋದರನ ಆರೈಕೆಯಲ್ಲಿ ನಿರತರಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೋಧ ಜನಾರ್ಧನ್ಗೌಡ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಮೃತ ಯೋಧನ ಪೋಷಕರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದಾಗ ಯೋಧ ಜನಾರ್ದನ್ಗೌಡ ಮೃತಪಟ್ಟಿ ರುವ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿದರು.
ಯೋಧನ ಸಾವಿನ ಹಿನ್ನೆಲೆಯಲ್ಲಿ ಕಿಕ್ಕೇರಿ ಗ್ರಾಮಸ್ಥರು ಸ್ವಯಂ ಪ್ರೇರಿತತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೌನಾಚರಣೆ ನಡೆಸುವ ಮೂಲಕ ಗೌರವ ಸಲ್ಲಿಸಿದರು. ಯೋಧನ ಮನೆ ಸೇರಿದಂತೆ ಇಡೀ ಕಿಕ್ಕೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.
ಮೃತದೇಹವನ್ನು ಸೇನೆಯ ವಿಮಾನದ ಮೂಲಕ ಇಂದು ಬೆಳಿಗ್ಗೆ 8ಗಂಟೆಗೆ ಚಂಡಿಗಡದಿಂದ ಬೆಂಗಳೂರಿಗೆ ಏರ್ ಲಿಪ್ಟ್ ಮಾಡಿದ್ದರು. ಬೆಳಿಗ್ಗೆ 10.30ಕ್ಕೆ ಬೆಂಗಳೂರಿಗೆ ಬಂದ ಯೋಧನ ಪಾರ್ಥಿವ ಶರೀರಕ್ಕೆ ನಮನವನ್ನು ಸಲ್ಲಿಸಿ ಬೆಂಗಳೂರಿನಿಂದ 11ಗಂಟೆಗೆ ಆರ್ಮಿ ಆಂಬುಲೆನ್ಸ್ ಮೂಲಕ ಸಂಜೆ 4ಗಂಟೆಗೆ ಕಿಕ್ಕೇರಿಗೆ ಯೋಧನ ಮೃತ ದೇಹವನ್ನು ತರಲಾಯಿತು.
ಕಿಕ್ಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತವು ಅವಕಾಶವನ್ನು ಕಲ್ಪಿಸಿತ್ತು. ನಂತರ ಕಿಕ್ಕೇರಿ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ನಂತರ ಯೋಧನ ಜಮೀನಿನ ಬಳಿ ಅಂತ್ಯಕ್ರಿಯೆಗೆ ಸಿದ್ದಪಡಿಸಲಾಗಿದ್ದ ಸ್ಥಳದಲ್ಲಿ ಜಿಲ್ಲಾಡಳಿತದ ವತಿಯಿಂದ ಮತ್ತು ತಾಲೂಕು ಆಡಳಿತದ ವತಿಯಿಂದ ಯೋಧನ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡುವ ಮೊದಲು ಗಾಳಿಯಲ್ಲಿ ಕುಶಾಲತೋಪು ಹಾರಿಸಿ ರಾಷ್ಟ್ರಗೀತೆಯನ್ನು ಹಾಡಿ ಅಂತಿಮ ನಮನವನ್ನು ಸಲ್ಲಿಸಲಾಯಿತು.
ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಮತ್ತು ಶಾಸಕ ಹೆಚ್.ಟಿ.ಮಂಜು ಮೃತ ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಮರ್ಪಣೆಯನ್ನು ಮಾಡಿದರು. ಯೋಧನ ಧರ್ಮಪತ್ನಿ ರಂಜಿತಾ, ತಂದೆ ಪ್ರಕಾಶ್, ತಾಯಿ ಭಾರತಿ, ಸಹೋದರ ಮಹೇಂದ್ರ ಸೇರಿದಂತೆ ಯೋಧನ ಬಂಧುಗಳು ಪಾರ್ಥಿವ ಶರೀರದ ಮುಂದೆ ಗೋಳಾಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.
ಗಣ್ಯರ ಸಂತಾಪ
ಮೃತ ಯೋಧ ಜನಾರ್ಧನ್ ಗೌಡ ಅವರ ಅಕಾಲಿಕ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ಬಿ.ಎಲ್.ದೇವರಾಜು, ಕೆ.ಎಸ್.ಪ್ರಭಾಕರ್, ಕಿಕ್ಕೇರಿ ಸುರೇಶ್, ಚೋಳೇನಹಳ್ಳಿ ಪುಟ್ಡಸ್ವಾಮೀಗೌಡ, ಬಿ.ಎಂ.ಕಿರಣ್, ಡಾಲು ರವಿ, ವಿಜಯ್ ರಾಮೇಗೌಡ, ಆರ್.ಟಿ.ಓ ಮಲ್ಲಿಕಾರ್ಜುನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಕೆ. ಅಶೋಕ್ ಮನ್ಮುಲ್ ಮಾಜಿ ನಿರ್ದೇ಼ಶಕ ಕೆ.ಜಿ.ತಮ್ಮಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಎಲ್.ಮೋಹನ್, ಬಲದೇವ್ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.