ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ಮಂಡ್ಯ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿನ ಎಸ್.ಡಿ.ಜಯರಾಂ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಜಮಾವಣೆಗೊಂಡು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ಕಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿ ದಿಕ್ಕಾರ ಕೂಗಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಎಚ್.ಎನ್.ಯೋಗೇಶ್ ಮಾತನಾಡಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಬಗ್ಗೆ ಅಗೌರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರು ಬುದ್ದಿಹೇಳಲಿ, ಇಲ್ಲವಾದರೆ ನಾವೇ ಬುದ್ದಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿರುವ ಹಾಗೆ, ‘ದೇವೇಗೌಡರ ಒಂದು ಉಗುರಿಗೆ ಕಟೀಲ್ ಸಮನಿಲ್ಲ. ದೇವೇಗೌಡರ ಕಾಲಿನ ಧೂಳಿಗೂ ಸಮನಲ್ಲ, ದೇವೇಗೌಡರ ಬಗ್ಗೆ ಗೊತ್ತಿಲ್ಲದಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಲಿ. ದೇವೇಗೌಡರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಇದು ಬಿಜೆಪಿ ನಾಯಕರಿಗೆ ನಾವು ನೀಡುತ್ತಿರುವ ಎಚ್ಚರಿಕೆಯಾಗಿದೆ ಎಂದು ಕಿಡಿಕಾರಿದರು.
ರಾಜ್ಯದಿಂದ ಬಿಜೆಪಿ ಟೆಂಟ್ ಕಿತ್ತುಕೊಂಡು ಹೋಗುವ ಕಾಲ ಬಂದಿದೆ. ಯಾವಾಗಲೂ ಧರ್ಮ ಧರ್ಮದ ನಡುವೆ ಹಿಂಸೆಯ ಬೆಂಕಿ ಹಚ್ಚುವುದೇ ನಿಮ್ಮ ಕೆಲಸವಾಗಿದೆ. ನಿಮ್ಮ ಯೋಗ್ಯತೆಗೆ ಸರಿಯಾಗಿ ಆಡಳಿತ ನಡೆಸಲು ಬರುತ್ತಿಲ್ಲ, ಯಾವ ಯೋಜನೆಗಳು ಬಡವರ ಉದ್ದಾರ ಮಾಡಿಲ್ಲ, ರೈತರನ್ನು ಸಂಕಷ್ಟದಲ್ಲೇ ಇರಿಸಿದ್ದೀರಿ, ಬೆಲೆ ಏರಿಕೆಯೇ ನಿಮ್ಮ ಕೊಡುಗೆ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇವೇಗೌಡರ ಕುಟುಂಬ ಅಧಿಕಾರಕ್ಕಾಗಿ ಚಪ್ಪಲಿಯಲ್ಲಿ ಹೊಡೆದಾಡುತ್ತಿದೆ’ ಎಂದು ಹೇಳಿಕೆ ನೀಡಿರುವ ನಳಿನ್ ಕುಮಾರ್ ಕಟೀಲ್ ಕೂಡಲೇ ದೇವೇಗೌಡರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭಾ ಸದಸ್ಯ ನಾಗೇಶ್, ಮುಖಂಡರಾದ ರಮೇಶ್, ಪುಟ್ಟಸ್ವಾಮಿ, ಮೋಹನ್ ಮತ್ತಿತರರಿದ್ದರು.