ನಾಗಮಂಗಲದಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಚೇತನ್ ರವರಿಗೆ ಸಮಾಜಸೇವಕ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಮುಖಂಡ ಮಲ್ಲಿಕಾರ್ಜುನ (ಫೈಟರ್ ರವಿ) ಧಮ್ಮಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಭಯ ಹುಟ್ಟಿಸಿರುವುದನ್ನು ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ತೀವ್ರ ಖಂಡಿಸಿದ್ದಾರೆ.
ಈ ದೇಶದಲ್ಲಿ ನ್ಯಾಯ ಮಾರ್ಗದಲ್ಲಿ ಯಾರು ಬೇಕಾದರೂ ಸಮಾಜ ಸೇವೆ ಮಾಡಬಹುದು. ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಎಲ್ಲಾ ಪ್ರಜೆಗಳು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಆದರೆ, ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಗೆ ಒಳಪಟ್ಟಿರಬಾರದು. ನ್ಯಾಯ ಮಾರ್ಗದಲ್ಲಿ ಉತ್ತಮ ರೀತಿಯಲ್ಲಿ ರಾಜಕೀಯ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ನಾಡಿನ ರೈತಾಪಿ ವರ್ಗ, ದೀನ ದಲಿತ, ಹಿಂದುಳಿದವರ, ಅಲ್ಪಸಂಖ್ಯಾತರ, ಬಡವರ, ಶೋಷಿತರ ವರ್ಗದವರ ಪರ ಹೋರಾಟ ಮಾಡುತ್ತಿರುವ ಜೆಡಿಎಸ್ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಧಮ್ಮಿ ಹಾಕಿ, ಎದುರಿಸಿ, ಬೆದರಿಸಿ ರಾಜಕೀಯ ಮಾಡುವುದು ಸೂಕ್ತವಲ್ಲ. ಇದು ಖಂಡನೀಯ ಎಂದಿದ್ಧಾರೆ.
ಇಂಥಹ ಗೊಡ್ಡು ಬೆದರಿಕೆಗಳಿಗೆ ನಮ್ಮ ಪಕ್ಷದ ಕಾರ್ಯಕರ್ತರು ಜಗ್ಗುವುದಿಲ್ಲ, ಎದೆ ಗುಂದುವುದಿಲ್ಲ. ನಮ್ಮ ವರಿಷ್ಠರು ಕರೆ ಕೊಟ್ಟರೆ ನಮ್ಮ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಮುನ್ನುಗ್ಗಲು ಹಿಂಜರಿಯುವುದಿಲ್ಲ. ಆದ್ದರಿಂದ (ಫೈಟರ್ ರವಿ)ಮಲ್ಲಿಕಾರ್ಜುನ್ ಕಾನೂನು ಬಾಹಿರವಾಗಿ ನಮ್ಮ ಕಾರ್ಯಕರ್ತರನ್ನು ಎದುರಿಸಿ, ಬೆದರಿಸಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಅವರು ಪೈಟರ್ ರವಿ ಅವರಿಗೆ ತಿರುಗೇಟು ನೀಡಿದ್ದಾರೆ.