ಪರಿಶಿಷ್ಟ ಸಮುದಾಯದ ಜನತೆ ಪಕ್ಷಭೇದ ಮರೆತು,ಪಕ್ಷಾತೀತವಾಗಿ ಛಲವಾದಿ ಮಹಾಸಭಾ ಸಂಘಟನೆಗೆ ಕೈಜೋಡಿಸುವಂತೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಸಲಹೆ ನೀಡಿದರು.
ಮಂಡ್ಯದ ಪ್ರವಾಸಿ ಮಂದಿರದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಸಮುದಾಯದ ಜನತೆ ಒಗ್ಗೂಡಿದರೆ ಬಲ ತರಲಿದೆ, ಸಂಘಟಿತರಾಗಿ,ಶಿಕ್ಷಣವಂತರಾಗಿ ಹೋರಾಟ ಮಾಡಬೇಕೆನ್ನುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು, ಅವರ ಮಾರ್ಗದರ್ಶನದಂತೆ ಸಾಗಲು ನಾವೆಲ್ಲರೂ ಕಂಕಣ ಬುದ್ಧರಾಗಬೇಕು ಎಂದರು.
ಸಂಘಟನೆಯಾಗಿ ರೂಪುಗೊಂಡು ಛಲವಾದಿ ಮಹಾಸಭಾದ ನಿರಂತರ ಶ್ರಮದ ಫಲವಾಗಿ ಹಲವರಿಗೆ ಸೂಕ್ತ ಸ್ಥಾನಮಾನ, ಗೌರವ ಸಂದಿದೆ, ಅಂತವರು ಇತ್ತ ಗಮನ ಹರಿಸಬಹುದಾಗಿತ್ತು, ಅದೇನು ಕಷ್ಟಕರ ವಿಚಾರವಾಗಿರಲಿಲ್ಲ, ಆದರೂ ಸಹ ಬೆಂಗಳೂರು ಸೇರಿ ರಾಜ್ಯದ ಆರೇಳು ಕಡೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿದೆ, ಈ ಮಧ್ಯೆ ಸಂಘಟನೆಯಲ್ಲಿ ತೊಡಕು ಉಂಟಾಗಿತ್ತು. ಇದೀಗ ಚುನಾವಣೆ ನಡೆದು ಎಲ್ಲವೂ ಸುಗಮವಾಗಿದ್ದು, ರಾಜ್ಯದ ಎಲ್ಲೆಡೆ ಸಂಚರಿಸಿ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಸಂಘಟನೆ ಕುಂಠಿತಗೊಂಡಿತ್ತು, ಇದೀಗ ಎಲ್ಲರೂ ಒಗ್ಗೂಡಿರುವುದು ಒಳ್ಳೆಯ ವಿಚಾರ, ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಸಂಘಟನೆಯಲ್ಲಿ ಸಕ್ರಿಯರಾಗಬೇಕು, ಮಹಾಸಭಾ ಆಶಯಗಳು ಜನರಿಗೆ ತಲುಪಬೇಕಾದರೆ ಜಿಲ್ಲಾ ಮಟ್ಟದಲ್ಲಿ ಸಂಘಟನೆಯ ಪಾತ್ರ ಪ್ರಮುಖವಾಗಿರಲಿದೆ ಎಂದರು.
ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಜಾಗ ಕೋರಲಾಗಿದ್ದು, ಅದರಂತೆ ಕಾಲೇಜಿನಲ್ಲಿ ನಿರ್ಮಾಣಕ್ಕೆ ಮುಂದಾಗಲಾಗುವುದು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಮಾವೇಶವನ್ನು ಸಂಘಟಿಸಲಾಗುವುದು, ಸುಮಾರು ಮೂರು ನಾಲ್ಕು ಲಕ್ಷ ಜನರನ್ನು ಸೇರಿಸಿ,ಅಧಿಕಾರದಲ್ಲಿರುವ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಯಾದಿಯಾಗಿ ಎಲ್ಲಾ ನಾಯಕರನ್ನ ಆಹ್ವಾನಿಸಿ ಯಶಸ್ವಿಗೆ ಶ್ರಮ ವಹಿಸಲಾಗುವುದು,ಇದಕ್ಕೆ ಮಹಾಸಭಾ ಎಲ್ಲರೂ ಸನ್ನದ್ಧರಾಗಿರಬೇಕು ಎಂದು ಹೇಳಿದರು,
ಛಲವಾದಿ ಮಹಾಸಭಾ ಪದಾಧಿಕಾರಿಗಳಾದ ನರಸಿಂಹಮೂರ್ತಿ ಸುರೇಶ್ ನಾರಾಯಣಸ್ವಾಮಿ ಶ್ರೀನಿವಾಸ್ ಮೂರ್ತಿ ರಾಜಣ್ಣ ಪುಟ್ಟಯ್ಯ ರಂಗರಾಜು ಆನಂದ್ ಕುಮಾರ್ ಮೀನಾಕ್ಷಿ ಸುನಂದಮ್ಮ ಚೈತ್ರ ಕಮಲಮ್ಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.