ಕಾಡಂದಿಗಳ ದಾಳಿಯಿಂದ ಬೆಳೆ ಹಾನಿಗೊಂಡರೇ ಆಯಾ ಗ್ರಾಮ ಪಂಚಾಯಿತಿಗಳಿಗೆ ನಷ್ಟದ ಅರ್ಜಿಗಳನ್ನು ಸಲ್ಲಿಸಿದರೆ ಪರಿಹಾರ ನೀಡಲು ಕ್ರಮವಹಿಸುವುದಾಗಿ ಮದ್ದೂರು ತಹಶೀಲ್ದಾರ್ ನರಸಿಂಹಮೂರ್ತಿ ಭರವಸೆ ನೀಡಿದರು.
ಹಂದಿಗಳ ಹಾವಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರು ಮಂಗಳವಾರ ಮದ್ದೂರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಕಾಡಂದಿ ಹಾಗೂ ಮುಳ್ಳಂದಿ ಸೇರಿದಂತೆ ಯಾವುದೇ ಕಾಡುಪ್ರಾಣಿಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರು ನಷ್ಟದ ವಿವರದೊಂದಿಗೆ ಅಯಾ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದರೆ, ಆರಣ್ಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲಿಸಿ ನಷ್ಟ ಅಂದಾಜಿಸಿ ಪರಿಹಾರಕ್ಕೆ ಶಿಪಾರಸ್ಸು ಮಾಡಲಿದ್ದಾರೆ ಎಂದರು.
ಬೆಳೆ ನಷ್ಟ ಕೋರಿ ಬರುವ ಅರ್ಜಿಗಳನ್ನು ಅಯಾ ಗ್ರಾ.ಪಂನಲ್ಲಿ ಸ್ವೀಕರಿಸುವ ಕುರಿತು ತಾ.ಪಂ.ನಿಂದ ಸುತೋಲೆ ಹೊರಡಿಸಲಾಗುವುದು. ಜನರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ತಾವೇ ಅರ್ಜಿ ಸಲ್ಲಿಸಿ, ನಿಮ್ಮ ಅರ್ಜಿಗಳನ್ನು ಅರಣ್ಯ ಇಲಾಖೆಯವರು ಇ-ಪರಿಹಾರ ದಡಿ ಅನ್ ಲೈನ್ ನಲ್ಲಿ ಅರ್ಜಿ ತುಂಬಲಿದ್ದು, ಅರ್ಜಿದಾರರಿಗೆ ಓಟಿಪಿ ಜೊತೆಗೆ ಅರ್ಜಿ ಸಂಖ್ಯೆಯ ಸಂದೇಶ ಬರಲಿದೆ ಎಂದರು.
ಅರಣ್ಯಾಧಿಕಾರಿ ಗವಿಯಪ್ಪ ಮಾತನಾಡಿ, ನಮ್ಮ ಉದ್ಯೋಗದ ಇಷ್ಟು ವರ್ಷಗಳಲ್ಲಿ ಹಂದಿಗಳ ಹಾವಳಿಯಿಂದ ಬೆಳೆ ನಷ್ಟ ಆಗಿರುವ ಸಂಗತಿ ಇಷ್ಟು ದೊಡ್ಡ ಮಟ್ಟದಲ್ಲಿ ಕಂಡು ಬಂದಿರುವುದ ಇದೇ ಮೊದಲ ಬಾರಿ. ಇದಕ್ಕೆ ಖಂಡಿತಾ ಪರಿಹಾರ ಇದೆ. ಎಲ್ಲಾ ರೈತರು ಅರ್ಜಿ ಸಲ್ಲಿಸಿ ಅರ್ಜಿ ಗ್ರಾಮ ಲೆಕ್ಕಿಗರಿಂದ ಬೆಳೆ ವರದಿ (ಆರ್.ಟಿ.ಸಿ. ಯಲ್ಲಿ ಬೆಳೆ ವರದಿ ನಮೂದಾಗದಿದ್ದಲ್ಲಿ) ಪಡೆದು ಅಯಾ ಗ್ರಾ.ಪಂ ಗೆ ಸಲ್ಲಿಸಲು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪರಮೇಶ್ ಮಾತನಾಡಿ, ಕಬ್ಬಿನ ಬುಡ ಉರುಳಿಸುವ ಮತ್ತು ಕಬ್ಬು ತುಂಡರಿಸುವುದನ್ನು ಹಂದಿಗಳು ಮಾಡುತ್ತಿದ್ದು, ಇದರ ನಷ್ಠದ ಅಂದಾಜು ಇದುವರೆಗೆ ಮಾಡಿರುವುದಿಲ್ಲ. ರೈತರಿಂದ ಅರ್ಜಿ ಬಂದ ಮೇರೆಗೆ ನಾವು ಅದನ್ನು ಅರಣ್ಯ ಇಲಾಖೆಗೆ ಕಳುಹಿಸಲಿದ್ದು, ಅರಣ್ಯ ಇಲಾಖೆಯಲ್ಲಿ ಹಂದಿಗಳ ಹಾವಳಿ ಮತ್ತು ನವಿಲಿನ ಹಾವಳಿಗೆ ಪರಿಹಾರ ಇದೆ ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಮಾತನಾಡಿ, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾಲಾಗಾರನಹಳ್ಳಿಯಲ್ಲಿ ಕಾಡುಹಂದಿ ಹಾವಳಿ ಕುರಿತು ಅರ್ಜಿ ಬರುವವರೆಗೆ ಹಂದಿಗಳ ಹಾವಳಿ ಇಲಾಖೆಯ ಗಮನಕ್ಕೆ ಬಂದಿರಲಿಲ್ಲ. ಅರ್ಜಿ ಬಂದ ತಕ್ಷಣ ಅಗತ್ಯ ಮಾರ್ಗದರ್ಶನಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಹಂದಿ ಹಾವಳಿ ತಡೆಗೆ ಪರಿಣಾಮಕಾರಿ ಕ್ರಮ ಸೂಚಿಸಲು ಮೇಲಾಧಿಕಾರಿಗಳಿಗೆ ಕೋರಿರುವುದಾಗಿ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಸೌಭಾಗ್ಯ ಮಹಾದೇವ್ ಅವರು ತಹಶೀಲ್ದಾರ್ ಅವರಿಗೆ ಮದ್ದೂರು ತಾಲೂಕಿನ ಹಂದಿಗಳ ಹಾವಳಿಯಿಂದಾದ ನಷ್ಟದ ಅಂದಾಜು ಮಾಡಲು ಮತ್ತು ಅರ್ಜಿ ಸ್ವೀಕಾರ ಮಾಡಲು ವಿಶೇಷ ಆಂದೋಲನ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷಣ್, ಲಕ್ಷಾಂತರ ತೆಂಗಿನ ಗಿಡ ಹಂದಿಯಿಂದಾದ ಹಾವಳಿಗೆ ನಷ್ಟವಾಗಿ ಕೋಟ್ಯಾಂತರ ರೂ. ನಷ್ಟ ಉಂಟಾಗಿದೆ, ಇದನ್ನು ಕೂಡಲೇ ಸರ್ಕಾರ ಭರಿಸಬೇಕೆಂದರು.
ಸೊ.ಶಿ.ಪ್ರಕಾಶ್ ಮಾತನಾಡಿ, ಕುಟುಂಬಗಳ ವಿಭಜನೆಯಿಂದ ಭೂಮಿ ಹಂಚಿಕೆಯಾಗಿ ತುಂಡು ಭೂಮಿಗಳಾಗುತ್ತಿವೆ, ಇರುವ ತುಂಡು ಭೂಮಿಗೂ ಕೃಷಿ ಕಾರ್ಯಕ್ಕೆ ಕಾರ್ಮಿಕರು ಸಿಗದೇ ಅಹಾರ ಧಾನ್ಯಗಳ ಬೆಳೆ ಬೆಳೆಯಲಾಗದೆ, ರೈತರು ತೆಂಗಿನ ಮೊರೆ ಹೋಗುತ್ತಿದ್ದು, ಇದೀಗ ಹಂದಿಗಳ ಹಾವಳಿಯಿಂದ ರೈತ ಸಾಲದ ಸುಳಿಗೆ ಸಿಲುಕುವ ಆತಂಕ ಉಂಟಾಗಿದೆ. ಸರ್ಕಾರ ರೈತರ ನೆರವಿಗೆ ನಿಂತು ಕೃಷಿಕರನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತೆಂಗುಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷಣ್, ಕರ್ನಾಟಕ ರಾಜ್ಯ ರೈತಸಂಘದ ಅಣ್ಣೂರು ಮಹೇಂದ್ರ ಕುಮಾರ್, ಕೆ. ಪಿ.ದೊಡ್ಡಿ ಪುಟ್ಟಸ್ವಾಮಿ, ಮಲ್ಲೇಶ್, ಅಂದಾನಿ, ಚಿಕ್ಕಮರಿಗೌಡ, ಬೆಸಗರಹಳ್ಳಿ ಮರಲಿಂಗು, ಪಣ್ಣೆದೊಡ್ಡಿ ವೆಂಕಟೇಶ್, ರಮೇಶ್ ಪ್ರಭುಲಿಂಗು, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ಕಾರ್ಯದರ್ಶಿ ಸುರೇಶ್ ಬೊಮ್ಮೆಗೌಡ ಬೇಲೂರು, ಗೊರವನಹಳ್ಳಿ ಮಹೇಶ್, ಅಜ್ಜಹಳ್ಳಿ ಶಿವಮಾದು, ಗ್ರಾ. ಪಂ.ಸದಸ್ಯರ ಒಕ್ಕೂಟದ ಗೌರವಾಧ್ಯಕ್ಷ ದಯಾನಂದ್ ವಳಗೆರೆಹಳ್ಳಿ, ಮಂಚಶೆಟ್ಟಿ ಕಡಿಲವಾಗಿಲು, ರಕ್ಷಿತ್ ಕುಮಾರ್, ಬೊಮ್ಮನದೊಡ್ಡಿ ಕೃಷ್ಣ, ಉಪ್ಪಿನಕೆರೆ ಶಿವರಾಮು, ಇಂದಿರಾ ಟಿಎಪಿಸಿಎಮ್ಎಸ್ ಅರ್ಜುನ ಉಪಸ್ಥಿತರಿದ್ದರು.
ಚಾಮನಹಳ್ಳಿ ರಾಮಲಿಂಗೇಗೌಡ, ಜವರೇಗೌಡ, ಹಾಲು ಉತ್ಪಾದಕರ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಕೆ.ರಾಜು ಗೆಜ್ಜಲಗೆರೆ, ಕರ್ನಾಟಕ ಕ್ರಾಂತಿದಳದ ಅಧ್ಯಕ್ಷ ಕ್ರಾಂತಿಸಿಂಹ, ರಾಜು ತರೀಕೆರೆ, ಪ್ರಸನ್ನ ಗೊರವನಹಳ್ಳಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಯುವ ಅಧ್ಯಕ್ಷ ತಿಪ್ಪೂರು ಮನು, ಬೆಳ್ಳೂರು ಮನೋಹರ್, ಹಳ್ಳಿಕೆರೆ ಬೊಮ್ಮಣ್ಣ ಪ್ರಗತಿಪರ ಸಂಘಟನೆಯ ಶ್ರೀಕಾ ಶ್ರೀನಿವಾಸ್, ಕ್ರಿಯೇಟಿವ್ ಆನಂದ್, ತೊರೆಶೆಟ್ಟಹಳ್ಳಿ ಪ್ರಸನ್ನಕುಮಾರ್, ಹುಲಿಗೆರೆಪುರ ರವಿ, ಜನಾರ್ದನ್ ಹೂತಗೆರೆ, ಬೋರಾಪುರ ಬಾಬು, ವಳಗೆರೆಹಳ್ಳಿ ಅವಿನಂದನ್, ಸಚ್ಚಿ ಹುಲಿಗೆರೆ ಪುರ, ಮಹಾದೇವ್ ಸೊಳ್ಳೆಪುರ, ಗಿರೀಶ್ ಅಜ್ಜಹಳ್ಳಿ, ಬಸವರಾಜ್ ಮಾಲಾಗಾರನಹಳ್ಳಿ ಮಲವರಾಜ್, ಕುದರಗುಂಡಿ ರಾಕೇಶ್, ನಗರಕೆರೆ ಜಗದೀಶ್, ಮದ್ದೂರು ಸಂತೋಷ್, ಕೋಣಸಾಲೆ ಉಮೇಶ್ ಭಾಗವಹಿಸಿದ್ದರು.