ಕಳೆದ ಒಂದೂವರೆ ದಶಕದಿಂದ ಕನ್ನಡ ನಾಡುನುಡಿ, ನೆಲಜಲ, ಸಂಸ್ಕೃತಿ ಸಂಬಂಧಿತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕನ್ನಡ ಸೇನೆ ವತಿಯಿಂದ ಜ.5ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರದ ಗಾಂಧಿಭವನದಲ್ಲಿ ಕನ್ನಡ ಜಾಗೃತಿ ಸಮಾವೇಶ, ಹಾಸ್ಯ ಮತ್ತು ಮಿಮಿಕ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸೇನೆ ಮಂಡ್ಯ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕನ್ನಡ ಜಾಗೃತಿ ಸಮಾವೇಶವನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ವಹಿಸುವರು. ಕನ್ನಡ ಜಾಗೃತಿ ಕುರಿತು ಇತಿಹಾಸ ತಜ್ಞ, ಮೇಲುಕೋಟೆ ಡಾ. ಶಲ್ವಪ್ಪಿಳ್ಳೆ ಅಯ್ಯಂಗಾರ್ ಪ್ರಧಾನ ಭಾಷಣ ಮಾಡುವರು.
ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಗಣಿಗ ರವಿಕುಮಾರ್, ಕದಲೂರು ಉದಯ್, ಕೆ.ಎಸ್. ವಿಜಯಾನಂದ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರಿಗೆ ‘ಕನ್ನಡ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮಹಾಂತಪ್ಪ, ಸೌಭಾಗ್ಯ ಶಿವಲಿಂಗು, ಮಂಜುನಾಥ್ ಬೆಟ್ಟಹಳ್ಳಿ ಹಾಗೂ ಕಮ್ಮನಾಯಕನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.