ಮಂಡ್ಯದ ಕಾರ್ಖಾನೆಗಳ ಒಕ್ಕೂಟದ ವತಿಯಿಂದ ಮಂಡ್ಯನಗರದ ಆಯೇಷಾ ಟ್ರೇಡರ್ಸ್ ಮುಂಭಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡಾಂಬೆ ಹಾಗೂ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸಮಾಜ ಸೇವಕ ನೂರ್ ಅಹ್ಮದ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡು-ನುಡಿಯ ಬಗ್ಗೆ ಎಲ್ಲರೂ ಅಪಾರವಾದ ಗೌರವ ತೋರಬೇಕು. ಕನ್ನಡ ಭಾಷೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಎಲ್ಲಾ ಧರ್ಮ ಹಾಗೂ ಸಮುದಾಯಕ್ಕೆ ಸೇರಿದೆ, ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ವ್ಯವಹಾರಕ್ಕಾಗಿ ಆಂಗ್ಲ ಭಾಷೆ ಬೇಕು. ಆದರೆ ನಾವು ಯಾವಾಗಲೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ಮಾತನಾಡಿ,ನವೆಂಬರ್ 1 ರಿಂದ ಇಡೀ ತಿಂಗಳು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಕನ್ನಡ ನಾಡಿಗೆ ಮೈಸೂರು ರಾಜರ ಕೊಡುಗೆ ಅಪಾರ. ಕನ್ನಡಾಂಬೆಯನ್ನು ನೆನೆಯುವುದರ ಜೊತೆಗೆ ಕನ್ನಡ ನಾಡು,ನುಡಿ ಉಳಿವಿಗೆ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕಿದೆ ಎಂದರು.
ನಗರಸಭಾ ಸದಸ್ಯ ಶ್ರೀಧರ್ ಮಾತನಾಡಿ,ಕೈಗಾರಿಕೆ ಪ್ರದೇಶದಲ್ಲಿ ಎಲ್ಲರೂ ಕೆಲಸದ ಒತ್ತಡದಲ್ಲೇ ಇರುತ್ತಾರೆ. ಆದರೆ ಅಂತಹ ಕೆಲಸವನ್ನು ಒಂದು ದಿನದ ಮಟ್ಟಿಗೆ ಬದಿಗಿಟ್ಟು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ ಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ರೈಸ್ ಮಿಲ್ ಮಾಲೀಕ ನಾಗರಾಜು, ಸುಜಿತ್, ಧಡ್ಕನ್, ಮುಸವೀರ್ ಖಾನ್ ಹಾಗೂ ಮಸೀದಿಗಳ ಅಧ್ಯಕ್ಷರು ಪಾಲ್ಗೊಂಡಿದ್ದರು.